ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರು ನಮ್ಮ ಮಾತನ್ನು ಏಕೆ ಕೇಳುವುದಿಲ್ಲ?

Last Updated 14 ನವೆಂಬರ್ 2022, 21:30 IST
ಅಕ್ಷರ ಗಾತ್ರ

ದೇಹಕ್ಕೆವಯಸ್ಸಾದಂತೆ, ಮನಸ್ಸಿಗೂ, ಮೆದುಳಿಗೂ ವಯಸ್ಸಾಗುತ್ತದೆ. ಆದರೆ ‘ಹಠ’ಕ್ಕೆ ವಯಸ್ಸಾಗುವುದಿಲ್ಲ!

‘ಅ ರೆರೆ ಮಕ್ಕಳು ನಮ್ಮ ಮಾತು ಏಕೆ ಕೇಳಲ್ಲ?’ ಎಂದು ನಾವು ಯೋಚನೆ ಮಾಡುತ್ತೇವೆ ಅಲ್ಲವೇ!

ಸುತ್ತಮುತ್ತಲೂ ಸ್ವಲ್ಪ ನೋಡಿ. ಇಡೀ ಜಗತ್ತಿಗೇ ವಯಸ್ಸು ಹೆಚ್ಚಾಗುತ್ತಾ ಇದೆ. ಮೊದಲು 60 ವರ್ಷವಾದರೆ ‘ಮುದುಕರು, ವೃದ್ಧರು’ ಎಂದುಕೊಳ್ಳುತ್ತಾ ಇದ್ದ ಜನ ಈಗ 80 ವರ್ಷಕ್ಕೂ ತಮಗೆ ವಯಸ್ಸಾಗಿದೆ ಎನ್ನುವುದನ್ನು ಬಡಪೆಟ್ಟಿಗೆ ಒಪ್ಪಿಕೊಳ್ಳದ ಸ್ಥಿತಿ ತಲುಪಿದ್ದಾರೆ. ಸುಧಾರಿತ ಜೀವನದ ಗುಣಮಟ್ಟ, ಆಧುನಿಕ ವೈದ್ಯಕೀಯ ಸೌಲಭ್ಯಗಳು ಆಯುಷ್ಯವನ್ನು ಹೆಚ್ಚಿಸಿರುವಂತೆಯೇ, ನಮ್ಮ ನಡುವೆ ವೃದ್ಧರ ಸಂಖ್ಯೆಯನ್ನೂ ಹೆಚ್ಚಿಸಿದೆ. ವೃದ್ಧರ ಮನೋಭಾವ-ಧೋರಣೆಗಳನ್ನು ಕಾಲಕ್ಕೆ ತಕ್ಕ ಹಾಗೆ ಬದಲಿಸಿದೆ. ಅವರೀಗ ತಮ್ಮನ್ನು ಯಾರೂ ‘ವೃದ್ಧರು’, ‘ಮುದುಕರು’ ಎಂದು ಕರೆಯುವುದನ್ನು ಒಪ್ಪುವುದಿಲ್ಲ! ತಮ್ಮ ಮೊಮ್ಮಕ್ಕಳ ಹತ್ತಿರ ‘ಅಜ್ಜ-ಅಜ್ಜಿ’ ಎಂದು ಕರೆಸಿಕೊಳ್ಳಬಹುದೇ ಹೊರತು, ಇತರರು ತಮ್ಮನ್ನು ‘ಅಜ್ಜ /ಅಜ್ಜಿ ಸ್ವಲ್ಪ ಈ ಕಡೆ ಸರೀತೀರಾ’ ಎಂದರೆ ಮುಖದ ಮೇಲೆ ಇರಿಸು ಮುರಿಸು ಮೂಡಿಸುತ್ತಾರೆ. ಅವರನ್ನು ಗೌರವದಿಂದ ‘ಹಿರಿಯ ನಾಗರಿಕರು’ ಎನ್ನುವುದೇ ಅವರ ಮುಖದ ಮೇಲೆ ತುಸು ಹೆಮ್ಮೆ ಮಿಶ್ರಿತ ಮುಗುಳ್ನಗು ತರಿಸುತ್ತದೆ.

ಇಂತಹ ಹಿರಿಯರು, ಜೀವನಾನುಭವ ಹೊಂದಿರುವವರು ಬೆಳೆದ ಮಕ್ಕಳ (ಈಗ ತಾವೂ ಹಿರಿಯರಾಗಿರುವವರು) ಮಾತು ಕೇಳುವುದಿಲ್ಲ ಎಂಬ ದೂರು ಸಾಮಾನ್ಯ. ಸಮಾಜ ಒಂದೆಡೆ ನಿಂತು ಮಕ್ಕಳಿಗೆ ಬುದ್ಧಿ ಹೇಳುವಾಗ ಮಕ್ಕಳು ನಿಸ್ಸಹಾಯಕರಾಗಿ ನಿಲ್ಲುವುದುಂಟು. ತಮ್ಮ ಚಿಕ್ಕ ಮಕ್ಕಳಂತೆಯೇ ತಮ್ಮ ಅಪ್ಪ-ಅಮ್ಮಂದಿರೂ ಹಠಮಾರಿಗಳು ಎಂದು ಬೈದುಕೊಳ್ಳುವುದೂ ಇದೆ. ಏಕೆ ಹೀಗೆ?? ತಮ್ಮ ಆರೋಗ್ಯದ ಬಗೆಗೆ ಕಾಳಜಿಯಿಂದಲೇ ಮಕ್ಕಳು ಹೇಳಿ, ಕೆಲವು ಕೆಲಸಗಳನ್ನು/ಚಟುವಟಿಕೆಗಳನ್ನು ಮಾಡಬೇಡಿ ಎಂದು ನಿರ್ಬಂಧಿಸಿದಾಗ ಹಿರಿಯರು ಅದನ್ನು ತಮ್ಮ ಕೈ-ಕಾಲು ಕಟ್ಟಿ ಹಾಕಿದಂತೆ ಎಂದು ಭಾವಿಸುವುದು ಏಕೆ?

ದೇಹಕ್ಕೆ ವಯಸ್ಸಾದಂತೆ, ಮನಸ್ಸಿಗೂ, ಮೆದುಳಿಗೂ ವಯಸ್ಸಾಗುತ್ತದೆ. ಆದರೆ ‘ಹಠ’ಕ್ಕೆ ವಯಸ್ಸಾಗುವುದಿಲ್ಲ! ವಯಸ್ಸಿನ ಜೊತೆ ಕುಂದುವ ದೇಹದ ಶಕ್ತಿ ಒಂದು ರೀತಿಯ ‘ಕಳೆದುಕೊಳ್ಳುವ ಭಯ’ವನ್ನು ಮೂಡಿಸುತ್ತದೆ. ಸ್ವಂತ ಉದ್ಯಮಗಳಲ್ಲಿರುವ, ನಿವೃತ್ತಿಯಿಲ್ಲದ ಉದ್ಯೋಗಗಳಲ್ಲಿರುವವರ ಮನಸ್ಸಿನಲ್ಲಿ ತನ್ನ ಅಧಿಕಾರವನ್ನು ಕಸಿದುಕೊಂಡಾರು, ತನ್ನ ಮಹತ್ವ ಕಡಿಮೆಯಾಯಿತು ಎಂಬ ಭಾವವನ್ನು ಸಹಜವಾಗಿ ತರುತ್ತದೆ. ಇಂತಹ ಸಂದರ್ಭಗಳಲ್ಲಿ ಈ ‘ಕಳೆದುಕೊಳ್ಳುವ ಭಯ’ ಮಕ್ಕಳ ಮಾತು ಕೇಳದಿರುವ ಛಲವನ್ನು ಮತ್ತಷ್ಟು ಹೆಚ್ಚಿಸಬಹುದು. ಒಂದೆಡೆ ಮಕ್ಕಳು ತಮ್ಮನ್ನು ಸರಿಯಾಗಿ ನೋಡುವುದಿಲ್ಲ, ತಮಗೆ ಬೇಕಾದಂತೆ ಇರಲು ಬಿಡುವುದಿಲ್ಲ ಎನ್ನುವ ಅಪ್ಪ-ಅಮ್ಮ; ಇನ್ನೊಂದೆಡೆ ‘ವಯಸ್ಸಾಗಿದೆ, ಆರಾಮಾಗಿ ಇರುವಂತೆ ಎಲ್ಲ ಸೌಲಭ್ಯ ಮಾಡಿಕೊಟ್ಟರೂ ಇವರು ನಾವು ಹೇಳಿದಂತಿರುವುದಿಲ್ಲ. ನಮ್ಮ ಮಾತು ಕೇಳದೆ ಅಲ್ಲಿ ಇಲ್ಲಿ ತಿರುಗುತ್ತಾರೆ. ಯಾವುದಾದರೊಂದು ಆರೋಗ್ಯದ ತೊಂದರೆ ಬಂದಾಕ್ಷಣ ‘ನಾವು ನಿಮಗೆ ಭಾರ’ ಎಂದು ಅಲವತ್ತುಕೊಳ್ಳುತ್ತಾರೆ’ – ಎನ್ನುವ ಮಕ್ಕಳು; ಇದು ಇಂದಿನ ದಿನಗಳಲ್ಲಿ ಆಗಾಗ್ಗೆ ಕಂಡುಬರುವ ಇಬ್ಬಗೆಯ ಸಂದರ್ಭ. ಯಾರು ಸರಿ? ಯಾರು ತಪ್ಪು? ಯಾರು ಯಾರ ಮಾತು ಕೇಳಬೇಕು?!

ಮನೋವೈದ್ಯೆಯಾಗಿ ದಿನನಿತ್ಯ ಇಂಥ ಹಿರಿಯ ನಾಗರಿಕರು, ಅವರ ಮಕ್ಕಳನ್ನು ನೋಡುವಾಗ ಇಬ್ಬರದೂ ‘ಸರಿಯೇ’, ‘ಅವರವರ ವಯಸ್ಸಿಗೆ ಅವರವರದು ಸರಿಯಾದ ಮನೋಭಾವವೇ’ ಅನ್ನಿಸುತ್ತದೆ. ಮಕ್ಕಳು ತಮ್ಮ ಕೆಲಸ ಬಿಟ್ಟು, ಮಕ್ಕಳ ವಿದ್ಯಾಭ್ಯಾಸ ಬದಿಗಿರಿಸಿ ಹಳ್ಳಿಗೆ ಬಂದು ಅಪ್ಪ-ಅಮ್ಮಂದಿರಿಗಾಗಿ ನೆಲೆಸುವುದು ಎಷ್ಟೋ ಕುಟುಂಬಗಳಲ್ಲಿ ಸಾಧ್ಯವಿರುವುದಿಲ್ಲ. ಹಾಗಾದರೆ ಅಪ್ಪ-ಅಮ್ಮಂದಿರಿಗೆ ‘ನೀವೇ ಬನ್ನಿ, ನಮ್ಮೊಂದಿಗಿರಿ, ಇಲ್ಲಿ ಏನಾದರೂ ವ್ಯವಸ್ಥೆ ನಾನು ಮಾಡುತ್ತೇನೆ‘ ಎಂದು ಮಗ /ಮಗಳು ಹೇಳಿದರೆ ಅವರು ತಮ್ಮ ‘ಬಹುದಿನ ಬಾಳಿದ ಮನೆ’ ಬಿಡುವುದಕ್ಕೆ ಅಪ್ಪ-ಅಮ್ಮ ಸಿದ್ಧರಿಲ್ಲ. ಇಂತಹ ಹಠದಲ್ಲಿ ಪುರುಷರದ್ದು ಮತ್ತಷ್ಟು ಮೇಲುಗೈ! ಅದರೊಂದಿಗೆ ಅವರು ಮತ್ತೆ ಮತ್ತೆ ‘ಅಚ್ಚರಿ’ಯ ಸಂಗತಿಯೊಂದರ ಬಗ್ಗೆ ಪ್ರಶ್ನಿಸುತ್ತಾರೆ: ‘ನನಗೆ ಇಷ್ಟು ವರ್ಷ ಈ ಸುಸ್ತು ಇರಲಿಲ್ಲ ಡಾಕ್ಟ್ರೇ. ಒಂದು ದಿವಸ ಆಸ್ಪತ್ರೆ ಮೆಟ್ಟಿಲು ಹತ್ತಿದವನಲ್ಲ, ಇಡೀ ತೋಟ ನಾಲ್ಕು ಸಲ ಹೋಗಿ ಬರುತ್ತಿದ್ದೆ. ಈಗ ಯಾಕೋ ಸುಸ್ತು’. ಅವರ ನಿರೀಕ್ಷೆ ‘ಸುಸ್ತಿಗೆ ಒಂದು ಮಾತ್ರೆ ಕೊಡಬೇಕು, ಅದರಿಂದ ಹಿಂದಿದ್ದಂತೆ ಮತ್ತೆ ಮೊದಲಿನ ಸ್ಥಿತಿಗೆ ಅವರಾಗಿ, ಇಡೀ ತೋಟ, ಬೀಸುಗಾಲಿನಿಂದ ನಾಲ್ಕು ಸಲ ಹೋಗಿ ಬರಬೇಕು’! ಆದರೆ ಈಗ ಅವರಿಗಿರುವುದು ಕಾಯಿಲೆಯಲ್ಲ, ‘ಇಳಿವಯಸ್ಸು’ ಎಂಬ ಸಹಜ ಹಂತ ಎನ್ನುವುದನ್ನು ಒಪ್ಪಿಕೊಳ್ಳುವುದು ಅವರಿಗೆ ಸುಲಭಸಾಧ್ಯವಲ್ಲ. ಅವರ ಮಕ್ಕಳಿಗೆ ಈ ಸತ್ಯ ಗೊತ್ತು. ಆದರೆ ಅವರಿಗೆ ಅದನ್ನು ಹಿರಿಯರಿಗೆ ಅರ್ಥ ಮಾಡಿಸುವ ಬಗೆ ಹೇಗೆಂಬುದು ತಿಳಿಯದು. ಪರಿಣಾಮ ಹಿರಿಯರು-ಮಕ್ಕಳ ಮಧ್ಯೆ ಹಲವು ಘರ್ಷಣೆಗಳು.

ಪರಿಸ್ಥಿತಿಯನ್ನು ಸುಧಾರಿಸುವುದು ಹೇಗೆ?

ಹಿರಿಯರು ಗಮನಿಸಬೇಕಾದ ಸಂಗತಿಗಳು

• ನೀವು ಪ್ರಬುದ್ಧರು; ಜೀವನಾನುಭವ ಉಳ್ಳವರು. ನೀವು ಯೌವನದಲ್ಲಿದ್ದಾಗ ಹಿರಿಯ ವಯಸ್ಸಿನವರ ನಡವಳಿಕೆಗಳು ತಂದ ಸಮಸ್ಯೆ/ಅವರು ಧನಾತ್ಮಕವಾಗಿ ನಡೆದ ಮಾದರಿಗಳನ್ನು ಒಮ್ಮೆ ನೆನೆಸಿಕೊಳ್ಳಿ.

• ಸಮಾಜದ ಇತರರು ನಿಮಗೆ ಗೌರವ ಕೊಡಬಹುದು; ಆದರೆ ನಿಮ್ಮ ಜವಾಬ್ದಾರಿ ಹೊರಲು ಸಾಧ್ಯವಿಲ್ಲ. ಮಕ್ಕಳ ಶ್ರಮ-ಕಾಳಜಿಗಳನ್ನು ಗೌರವಿಸಿ, ಒಳ್ಳೆಯ ಮಾತು ಹೇಳಿ.

• ‘ಮಕ್ಕಳಿಗೆ ನೀವು ಹೊರೆ’ ಎಂಬ ಮಾತು ಬೇಡವೇ ಬೇಡ. ಮತ್ತೆ ಮತ್ತೆ ಹಾಗೆ ಹೇಳುವುದು ಮಕ್ಕಳಿಗೂ ಬೇಸರವನ್ನೇ ತರಿಸಬಹುದು. ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಲು ನೀವೇ ಕೆಲವು ನಿರ್ಬಂಧಗಳನ್ನು ಹಾಕಿಕೊಳ್ಳುವುದು ಸೂಕ್ತ. ಸಾಮಾಜಿಕ-ಕೌಟುಂಬಿಕವಾಗಿ ಒಂದು ಮಿತಿಯಲ್ಲಿ ಚಟುವಟಿಕೆಯಿಂದಿರಿ.
ಹಿರಿಯರ ಮಕ್ಕಳು ಗಮನಿಸಬೇಕಾದ ಸಂಗತಿಗಳು

• ಅಪ್ಪ-ಅಮ್ಮಂದಿರನ್ನು ನೋಡಿಕೊಳ್ಳುವುದು ಕರ್ತವ್ಯ. ಧನ್ಯತೆಯನ್ನೂ ಅದು ತರಬಲ್ಲದು. ನಿಮ್ಮ ಮಕ್ಕಳಿಗೆ ಅದೊಂದು ಮಾದರಿ ಎನ್ನುವುದನ್ನು ಮರೆಯಬೇಡಿ.

• ಸಮಾಜ ‘ನೀವು ಹೀಗೆ ಮಾಡಬೇಕಿತ್ತು, ಈ ರೀತಿ ನೋಡಬೇಕಿತ್ತು’ ಎಂದ ತಕ್ಷಣ ಪ್ರತಿಕ್ರಿಯಿಸಬೇಡಿ. ನೀವು ಪ್ರಾಮಾಣಿಕವಾಗಿ ನಿಮ್ಮ ಕೆಲಸ ನಿರ್ವಹಿಸಿದ್ದರೆ, ಸುಮ್ಮನಿದ್ದುಬಿಡಿ. ಗೊಂದಲವಿದ್ದರೆ ವೃತ್ತಿಪರ ಸಲಹೆ ಪಡೆದುಕೊಳ್ಳಿ.

ಇನ್ನು ಸಮಾಜದ ನಾವು-ನೀವು!

• ಸಾರ್ವಜನಿಕವಾಗಿ ಹಿರಿಯರಿಗೆ ನೀವು ಸಹಾಯ ಮಾಡುವ ಪರಿಸ್ಥಿತಿ ಬಂದಾಕ್ಷಣ, ಅವರ ಮಕ್ಕಳು ಅವರನ್ನು ಸರಿಯಾಗಿ ನೋಡುತ್ತಿಲ್ಲ ಎಂಬ ಪೂರ್ವಗ್ರಹ ಬೇಡ.

• ಹಿರಿಯರನ್ನು ಅವರ ಮಕ್ಕಳನ್ನು ಕೇಳದೆ/ಒಪ್ಪಿಗೆ ಪಡೆಯದೆ ಸಾರ್ವಜನಿಕ ಸಂಘ-ಸಂಸ್ಥೆಗಳ ಕೆಲಸಕ್ಕೆ ಪ್ರೋತ್ಸಾಹಿಸಬೇಡಿ/ತೊಡಗಿಸಬೇಡಿ.

• ಪುಕ್ಕಟೆ ಸಲಹೆಗಳನ್ನು ನೀಡಿ, ಆ ಕ್ಷಣದ ವೀರರಾಗುವುದರಿಂದ ದೂರವಿರಿ.

ಹಿರಿಯರ ಬದುಕನ್ನು ಹಸನು ಮಾಡುವತ್ತ, ‘ಇಳಿ ವಯಸ್ಸಿನಲ್ಲಿ ತಿಳಿ ಮನಸ್ಸು’ ಅವರದಾಗುವಂತೆ ಮಾಡುವತ್ತ ಎಲ್ಲರೂ ಈ ಸಲಹೆಗಳನ್ನು ಪಾಲಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT