ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ 1ರಿಂದ 7ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹ: ತಿಳಿದಿರಬೇಕಾದ ಸಂಗತಿಗಳು

Last Updated 1 ಆಗಸ್ಟ್ 2021, 3:23 IST
ಅಕ್ಷರ ಗಾತ್ರ

ದಾವಣಗೆರೆ: ‘ಅಮ್ಮ ಎನ್ನುವ ಆ ಕರೆಯೂ ಎನಿತು ಮಧುರವಮ್ಮ’ ಹಾಡು ಕೇಳಿದಾಕ್ಷಣ ಏನೋ ಒಂದು ರೀತಿಯ ರೋಮಾಂಚನ. ತಾಯಿಯ ಗರ್ಭದಿಂದಲೇ ಆರಂಭವಾದ ಈ ಸಂಬಂಧ, ಮಗು ಜನಿಸಿದ ನಂತರ ಸ್ತನ್ಯಪಾನದಿಂದ ಮುಂದುವರಿಯುತ್ತದೆ. ನಮ್ಮ ಭಾರತ ದೇಶದಲ್ಲಿ ಈ ಸಂಬಂಧಕ್ಕೆ ದೈವಿಕ ಸ್ಥಾನಮಾನವಿದೆ. ಎದೆಹಾಲುಣಿಸಿದ ತಾಯಿ ದೇವರಿಗೆ ಸಮಾನ.

ತಾಯಿ ಮಗುವಿಗೆ ಎದೆಹಾಲುಣಿಸುವ ಪ್ರಕ್ರಿಯೆ ಶತ–ಶತಮಾನಗಳಿಂದ ನಡೆದುಕೊಂಡು ಬಂದಿದೆ. ಇದರಲ್ಲಿ ಹೊಸತೇನೂ ಇಲ್ಲ. ಆದರೆ, ನಾಗರಿಕತೆ ಬೆಳೆದಂತೆ ಮಹಿಳೆಯ ಕಾರ್ಯಕ್ಷೇತ್ರವೂ ಬದಲಾಗುತ್ತಿವೆ. ಈ ಬದಲಾವಣೆಗಳು ತಾಯಿ–ಮಗುವಿನ ಸಂಬಂಧದ ಮೇಲೂ ಆಗುತ್ತಿದೆ.

ತಾಯಂದಿರು ತಿಳಿಯಬೇಕಾದ ಸಂಗತಿಗಳು

* ಮಗು ಜನಿಸಿದ ಅರ್ಧ ಗಂಟೆಯಿಂದ 1 ಗಂಟೆಯೊಳಗೆ ಮೊದಲ ಬಾರಿಗೆ ಎದೆಹಾಲುಣಿಸಬೇಕು.

* ಮೊದಲ 3 ದಿನ ಬರುವ ಗೀಬಿನ ಹಾಲನ್ನು (ಕೊಲೊಸ್ಟ್ರೋಮ್) ಮಗುವಿಗೆ ನೀಡಲೇಬೇಕು.

* ಮೊದಲು ಬರುವ ಹಳದಿ ವರ್ಣದ ಗಟ್ಟಿಹಾಲು ಮಗುವಿಗೆ ಮೊದಲ ಲಸಿಕೆ ಇದ್ದಂತೆ.

* ಕೊಲೊಸ್ಟ್ರೋಮ್‌ನಲ್ಲಿ ಪೌಷ್ಟಿಕಾಂಶ ಉತ್ಕೃಷ್ಟವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಮುಂಬರುವ ದೀರ್ಘಕಾಲಿನ ಕಾಯಿಲೆಗಳನ್ನು ತಡೆಗಟ್ಟುತ್ತದೆ.

* ಮಗುವಿನ ಜಠರ ಸ್ವಚ್ಛವಾಗುತ್ತದೆ.

* 6 ತಿಂಗಳು ತುಂಬುವವರೆಗೂ ಕೇವಲ ಎದೆಹಾಲನ್ನೇ ಕೊಡಬೇಕು. (ವೈದ್ಯರು ತಿಳಿಸಿದ ಔಷಧಗಳನ್ನು ಹೊರತು ಪಡಿಸಿ) ಎಂತಹ ಕಡುಬೇಸಿಗೆ ಇದ್ದರೂ ನೀರನ್ನು ಕುಡಿಸುವ ಅವಶ್ಯಕತೆ ಇರುವುದಿಲ್ಲ.

* ಎದೆಹಾಲನ್ನು ಹೊರತುಪಡಿಸಿ ಹರಳೆಣ್ಣೆ, ಜೇನುತುಪ್ಪ, ಸಕ್ಕರೆನೀರು, ಹಸುವಿನ ಹಾಲು, ಪೌಡರ್ ಹಾಲನ್ನು ಕೊಡಬಾರದು.

* 6 ತಿಂಗಳು ತುಂಬಿದ ನಂತರ ಎದೆಹಾಲಿನೊಂದಿಗೆ ಪೂರಕ–ಪೋಷಕ ಮೆದು ಆಹಾರ ಆರಂಭಿಸಬೇಕು.

* ಮಗುವಿಗೆ 2 ವರ್ಷ ತುಂಬವ ತನಕ ಎದೆಹಾಲನ್ನು ಮುಂದುರಿಸಬೇಕು. ಇದು ಮಗುವಿನ ಮೆದುಳು ಬೆಳವಣಿಗೆಗೂ ಅವಶ್ಯಕ ಹಾಗೂ ಮಗುವಿನ ಬುದ್ಧಿಮಟ್ಟವನ್ನು ಹೆಚ್ಚಿಸುತ್ತದೆ.

* ಸೂಕ್ತ ರೀತಿಯಲ್ಲಿ ಎದೆಹಾಲುಣಿಸುವುದರಿಂದ ತಾಯಿ ಬೇಗ ಗರ್ಭ ಧರಿಸುವುದಿಲ್ಲ. ಇದು ನೈಸರ್ಗಿಕ ಕುಟುಂಬ ಯೋಜನೆ ಇದ್ದಂತೆ.

* 2 ವರ್ಷ ಸರಿಯಾಗಿ ಎದೆಹಾಲುಣಿಸಿದ ತಾಯಿಂದಿರಿಗೆ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಬರುವುದು ಅಪರೂಪ

* ಸ್ತನ್ಯಪಾನ ಮಾಡಿಸುವ ತಾಯಿ–ಮಗುವಿನ ಬಾಂಧವ್ಯ ಸುಮಧುರವಾಗಿರುತ್ತದೆ.

* ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ. ದೇಶದ ಆರ್ಥಿಕತೆಗೂ ಸಹಾಯಕ.

ಸ್ಯನ್ಯಪಾನಕ್ಕಿರುವ ಅಡ್ಡಿಯಾಗುವ ಅಂಶಗಳು

* ಮೊದಲ 3 ದಿನ ಬರುವ ಗೀಬಿನ ಹಾಲು ಕೆಟ್ಟ ಹಾಲಾಗಿದ್ದ ಕೊಡಬಾರದೆಂಬ ಮೂಢನಂಬಿಕೆ.

* ಮಗುವಿನ ಹೊಟ್ಟೆ ಸ್ವಚ್ಛವಾಗಲಿ ಎಂದು ಆರಂಭದ 3 ದಿನ ಹರಳೆಣ್ಣೆ ಚೀಪಿಸುವ ಪದ್ಧತಿ.

* ಕೇವಲ ಎದೆಹಾಲೇ 6 ತಿಂಗಳು ಸಾಕಾಗುವುದಿಲ್ಲ ಎಂಬ ಭಾವನೆ.

* ಕುಟುಂಬದಲ್ಲಿ ತಾಯಿಗೆ ಮಾನಸಿಕ ಬೆಂಬಲ ನೀಡುವವರ ಕೊರತೆ.

* ಕಾರ್ಯನಿರತ ಮಹಿಳೆಯರಿಗೆ ರಜೆಯ ಅನಾನುಕೂಲ. ಕೆಲಸದ ಸ್ಥಳದಲ್ಲಿ ಎದೆಹಾಲುಣಿಸುವ ಸೌಲಭ್ಯವಿಲ್ಲದಿರುವುದು.

* ಎದೆಹಾಲುಣಿಸುವ ತಾಯಂದಿರಿಗೆ ಬರುವ ಸಂಶಯ ನಿವಾರಿಸಲು ಆಪ್ತಸಮಾಲೋಚನೆಯ ಕೊರತೆ.

* ಪೌಡರ್ ಹಾಲು, ಬಾಟಲಿ ಹಾಲಿಗೆ ಮಾರು ಹೋಗುವ ತಾಯಂದಿರು.

* ಸಿಸೇರಿಯನ್ ಆದ ತಾಯಂದಿರಿಗೆ, ಚೊಚ್ಚಲ ಅಪ್ರಾಪ್ತ ಬಾಣಂತಿಯರಿಗೆ, ಅವಳಿ–ಜವಳಿ ಮಕ್ಕಳಿದ್ದ, ಕಡಿಮೆ ತೂಕದ ಮಗುವಿರುವ ತಾಯಂದಿರಿಗೆ ಮಾಹಿತಿ ಕೊರತೆ.

* ಮಗುವಿಗೆ 2 ವರ್ಷ ತುಂಬುವ ಮೊದಲೇ ತಾಯಿ ಮತ್ತೆ ಗರ್ಭಿಣಿಯಾಗುವುದು.

ಸ್ತನ್ಯಪಾನ ಸಂರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳು

* ಹೆರಿಗೆಗೂ ಮುನ್ನವೇ ‘ಕೊಲೊಸ್ಟ್ರೋಮ್’ ಬಗ್ಗೆ ತಾಯಿಗೆ ಮಾಹಿತಿ ಇರಬೇಕು.

* ಹೆರಿಗೆಯ ನಂತರ ಆಸ್ಪತ್ರೆಯಿಂದ ಹೋಗುವ ಮುನ್ನವೇ ಯಶಸ್ವಿಯಾಗಿ ಎದೆಹಾಲುಣಿಸಬಲ್ಲೆ ಎಂಬ ಭರವಸೆ ತಾಯಿಗೆ ಬಂದಿರಬೇಕು.

* ಎದೆಹಾಲುಣಿಸುವ ಅವಧಿಯಲ್ಲಿ ತಾಯಂದಿರಿಗೆ ಕುಟುಂಬದವರ ಸಹಕಾರ ಅತಿ ಮುಖ್ಯ.

* ತಾಯಿಗೆ ಪೌಷ್ಟಿಕ ಆಹಾರ ನೀಡಿ, ಸಂತೋಷವಾಗಿರುವಂತೆ ನೋಡಿಕೊಳ್ಳಬೇಕು.

* ಕಾರ್ಯನಿರತ ಮಹಿಳೆಯರಿಗೆ ಎದೆಹಾಲು ತೆಗೆಯುವ, ಸಂರಕ್ಷಿಸುವ ವಿಧಾನವನ್ನು ಕಲಿಸುವುದು, ಕೆಲಸದ ಸ್ಥಳದಲ್ಲಿಯೂ ಎದೆಹಾಲುಣಿಸಲು ಅನುಕೂಲ ಮಾಡಿಕೊಡುವುದು.

* ಮಗು ತೀವ್ರ ನಿಗಾ ಘಟಕದಲ್ಲಿದ್ದರೆ ಎದೆಹಾಲನ್ನು ನೀಡುವ ವಿಧಾನ, ಕಡಿಮೆ ತೂಕದ ಮಗು ಜನಿಸಿದಾಗ ‘ಕಾಂಗರು ಮದರ್ ಕೇರ್’ ವಿಧಾನ ತೋರಿಸಿಕೊಡುವುದು.

* ಪೌಡರ್ ಹಾಲು, ಬಾಟಲಿ ಹಾಲಿನ ಅಪಾಯದ ಬಗ್ಗೆ ತಾಯಂದಿರಲ್ಲಿ ಜಾಗೃತಿ ಮೂಡಿಸಬೇಕು.

‘ಸ್ತನ್ಯಪಾನ ರಕ್ಷಣೆ–ಯಾರು ಹೊಣೆ’ ಎಂಬುದು ‘ವಿಶ್ವ ಸ್ತನ್ಯಪಾನ ಸಪ್ತಾಹ–2021’ರ ಘೋಷಣೆಯಾಗಿದೆ. ಸ್ತನ್ಯಪಾನವನ್ನು ಸಂರಕ್ಷಿಸಿ, ಪೋತ್ಸಾಹಿಸಿ, ಮುಂದುವರಿಸಲು ಸರ್ಕಾರ, ಆರೋಗ್ಯ ಇಲಾಖೆ, ಸಂಘ–ಸಂಸ್ಥೆಗಳು, ಕುಟುಂಬದ ಸದಸ್ಯರೆಲ್ಲರೂ ಹೊಣೆ ಹೊರಬೇಕಾಗಿದೆ.

ಸರ್ಕಾರ ಐ.ಎಂ.ಎಸ್. ಕಾರ್ಯದೆಯನ್ನು ಕಡ್ಡಾಯಗೊಳಿಸಿ, ಅನುಷ್ಠಾನಗೊಳಿಸಬೇಕು. ಎದೆಹಾಲುಣಿಸಲು ಆಗುವ ತೊಂದರೆ ನಿವಾರಿಸಲು ದಿನದ 24 ಗಂಟೆಯೂ ಆರೋಗ್ಯ ಇಲಾಖೆಯಿಂದ ಸೇವೆ ಲಭಿಸಬೇಕು. ಪೌಡರ್‌ ಹಾಲು, ಬಾಟಲಿ ಹಾಲಿನ ಭರಾಟೆಯಿಂದ ಸ್ತನ್ಯಪಾನವನ್ನು ಸಂರಕ್ಷಿಸಲು ಸಂಘ–ಸಂಸ್ಥೆಗಳು ಮುಂದೆ ಬರಬೇಕು. ಕುಟುಂಬದ ಸದಸ್ಯರೆಲ್ಲರೂ ತಾಯಿಗೆ ಮಾನಸಿಕ ಬೆಂಬಲ ನೀಡಿ ಪೋತ್ಸಾಹಿಸಬೇಕು.

ಇಷ್ಟೆಲ್ಲ ಸವಾಲುಗಳ ನಡುವೆ ಕೋವಿಡ್‌ ಎಂಬ ಹೊಸ ಸಮಸ್ಯೆಯನ್ನು ಎದುರಿಸಿ, ಯಶಸ್ವಿಯಾಗಿ ಸ್ತನ್ಯಪಾನ ಮಾಡಿಸುವುದು ಮತ್ತೊಂದು ದೊಡ್ಡ ಸವಾಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯೂ ಗರ್ಭಿಣಿಯರು ಮತ್ತು ಎದೆಹಾಲುಣಿಸುವ ಮಹಿಳೆಯರೂ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ತಿಳಿಸಿದೆ. ಗರ್ಭಿಣಿಯು 3 ತಿಂಗಳ ನಂತರ ಹಾಗೂ 7 ತಿಂಗಳಿನ ಒಳಗೆ ಲಸಿಕೆಯನ್ನು ಹಾಕಿಸಿಕೊಳ್ಳುವುದು ಸೂಕ್ತ. ಆಕಸ್ಮಾತಾಗಿ ಹೆರಿಗೆಯ ನಂತರ ತಾಯಿಗೆ ಕೋವಿಡ್ ಇದೆ ಎಂದು ತಿಳಿದುಬಂದರೆ ತಾಯಿ ಎದೆಹಾಲುಣಿಸಬಹುದು. ಆದರೆ, ಸ್ತನ್ಯಪಾನದ ನಂತರ ಮಗುವಿನಿಂದ ದೂರವಿರಬೇಕು.

––––

ಲೇಖಕರು:

ಡಾ.ಗುರುಪ್ರಸಾದ್

ಮಕ್ಕಳ ತಜ್ಞರು ಹಾಗೂ ನವಜಾತ ಶಿಶು ತಜ್ಞರು

ಅನಿತಾ.ಬಿ

ಫೀಲ್ಡ್ ರೀಸರ್ಚ್‌ ಆಫೀಸರ್

ಬಾಪೂಜಿ ಮಕ್ಕಳ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT