ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕಿನಿಂದ ಮುಕ್ತವಾದರೂ ಕಾಡುವ ಮಾನಸಿಕ ಸಮಸ್ಯೆ

Last Updated 1 ಸೆಪ್ಟೆಂಬರ್ 2020, 5:31 IST
ಅಕ್ಷರ ಗಾತ್ರ

ನಮ್ಮ ದೇಹವು ಭಯವನ್ನು ಎದುರಿಸುವಾಗ ಒತ್ತಡಕ್ಕೆ ಒಳಗಾಗುವುದು ಸಹಜ. ನಮ್ಮ ದೇಹವೂ ಆ ಒತ್ತಡವನ್ನು ಎದುರಿಸುವ ಮೂಲಕ ಅಥವಾ ಅದರಿಂದ ತಪ್ಪಿಸಿಕೊಳ್ಳುವುದರ ಮೂಲಕ ಆ ಒತ್ತಡವನ್ನು ನಿವಾರಿಸಲು ಪ್ರಯತ್ನಿಸುತ್ತದೆ. ಆದರೆ, ಹಲವು ಸನ್ನಿವೇಶಗಳಲ್ಲಿ ವಿಪರೀತವಾದ ಹಿಂಸೆ, ನೋವು, ಲೈಂಗಿಕ ದೌರ್ಜನ್ಯ, ನೈಸರ್ಗಿಕ ವಿಪತ್ತುಗಳಂತಹ ಜೀವ ಮತ್ತು ಸುರಕ್ಷತೆಗೆ ಅಪಾಯವಾಗುವಂತಹ ಸಂದರ್ಭದಲ್ಲಿ, ತೀವ್ರವಾದ ಒತ್ತಡವನ್ನು (ಆಘಾತ) ಎದುರಿಸಿದಾಗ, ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಇಂತಹ ಆಘಾತವನ್ನು ಪರಿಹರಿಸಲು ನಾವು ಅಸಮರ್ಥರಾದಾಗ ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿ.ಟಿ.ಎಸ್.ಡಿ) ಉಂಟಾಗುತ್ತದೆ.

ಪಿ.ಟಿ.ಎಸ್.ಡಿ ಲಕ್ಷಣಗಳು

ಪಿ.ಟಿ.ಎಸ್.ಡಿಯಿಂದ ಉಂಟಾಗುವ ದೈಹಿಕ ಲಕ್ಷಣಗಳೆಂದರೆ ನಿದ್ರೆಯ ತೊಂದರೆ, ನಡುಕ ಹಾಗೂ ಹೆಚ್ಚಾದ ಎದೆ ಬಡಿತ. ಮಾನಸಿಕ ಲಕ್ಷಣಗಳಾದ ಉದ್ವೇಗ, ಆತಂಕ, ಅನವಶ್ಯಕ ಜಾಗರೂಕತೆ, ಏಕಾಗ್ರತೆಯ ತೊಂದರೆ, ಅಸುರಕ್ಷಿತ ಭಾವನೆ, ದುಃಸ್ವಪ್ನಗಳು, ಆಘಾತದ ಫ್ಲ್ಯಾಷ್‌ಬ್ಯಾಕ್, ಕಾರಣವಿಲ್ಲದ ಕೋಪ, ಗೊಂದಲಮಯ ಮನಸ್ಸು, ನಕಾರಾತ್ಮಕ ಆಲೋಚನೆಗಳು ಮತ್ತು ಮಾನಸಿಕ ಯಾತನೆ ರೋಗಿಗಳನ್ನು ಕಾಡುತ್ತವೆ. ಆಘಾತ ನೆನಪಿಸುವ ಪ್ರೀತಿಪಾತ್ರರಿಂದ ಮತ್ತು ವಾತಾವರಣದಿಂದ ದೂರವಿದ್ದು ಆತ ತನ್ನೊಳಗೆ ಹಿಂಸೆಯಿಂದ ಬಳಲುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದಕ್ಕೆ ಚಿಕಿತ್ಸೆ ಇದೆಯೇ ?

ಪಿ.ಟಿ.ಎಸ್.ಡಿಯನ್ನು ತಡೆಗಟ್ಟಲು ಸಾಧ್ಯ ಹಾಗೂ ಅದಕ್ಕೆ ಚಿಕಿತ್ಸೆಯೂ ಇದೆ. ಇದನ್ನು ತಡೆಗಟ್ಟಲು ಕೆಲವು ಸಲಹೆಗಳು ಇಲ್ಲಿವೆ.

lಆರೋಗ್ಯಕರ ದಿನಚರಿಯನ್ನು ಪುನಃ ಆರಂಭಿಸಿ

l7–8 ಗಂಟೆಯ ಸಮಯೋಚಿತ ನಿದ್ರೆ ಹಾಗೂ ವಿಶ್ರಾಂತಿ ಪಡೆಯಿರಿ

lಕೋವಿಡ್ ಸುದ್ದಿಗೆ ಸಂಬಂಧಿಸಿದ ಮಾಧ್ಯಮ ಹಾಗೂ ಇಂಟರ್‌ನೆಟ್ ಬಳಕೆಯನ್ನು ಮಿತಗೊಳಿಸಿ

lನಿಮ್ಮ ಭಾವನೆಗಳನ್ನು ತಿರಸ್ಕರಿಸದೆ ಸ್ವೀಕರಿಸಿ

lಸ್ನೇಹಿತರು ಮತ್ತು ಕುಟುಂಬ ಸದಸ್ಯರೊಡನೆ ಸಂಪರ್ಕದಲ್ಲಿರಿ

lನಿಮ್ಮ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ

lಮನೋವೈದ್ಯರ ಸಲಹೆ ಪಡೆಯಿರಿ

ಯಾವಾಗ ಮನೋವೈದ್ಯರನ್ನು ಕಾಣಬೇಕು?

ಕೋವಿಡ್‌ನಿಂದ ಗುಣಮುಖರಾಗಿ ಒಂದು ತಿಂಗಳ ನಂತರವೂ ನಿಮಗೆ ನೆಮ್ಮದಿಯ ನಿದ್ರೆ ಬರದಿದ್ದಲ್ಲಿ, ಕಹಿ ನೆನಪುಗಳು ಮತ್ತು ಬೇಡವಾದ ಯೋಚನೆಗಳಿಂದ ಮನಸ್ಸಿಗೆ ಶಾಂತಿ ಇಲ್ಲದಿದ್ದಲ್ಲಿ, ಯಾವಾಗಲೂ ಉದ್ವೇಗದಿಂದ ಹಿಂಸೆ ಅನುಭವಿಸುತ್ತಿದ್ದಲ್ಲಿ, ಕಾರಣವಿಲ್ಲದೆ ಕೋಪ, ದುಃಖ ಉಂಟಾದಲ್ಲಿ, ಮೇಲೆ ಸೂಚಿಸಿರುವ ಅಂಶಗಳು ಕಂಡುಬಂದಲ್ಲಿ ಹಾಗೂ ಕೆಲಸದ ಸಾಮರ್ಥ್ಯ ಕಡಿಮೆಯಾದಲ್ಲಿ ಕೂಡಲೇ ನಿಮ್ಮ ಹತ್ತಿರದ ಮನೋವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಪಿ.ಟಿ.ಎಸ್.ಡಿ ಸಮಸ್ಯೆಗೆ ಪರಿಣಾಮಕಾರಿ ಕೌನ್ಸೆಲಿಂಗ್ ಹಾಗೂ ಔಷಧ ಚಿಕಿತ್ಸೆಯೂ ಇದೆ.

(ಲೇಖಕ: ವೈದ್ಯರು, ಮನೋವೈದ್ಯಶಾಸ್ತ್ರ ವಿಭಾಗ, ನಿಮ್ಹಾನ್ಸ್, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT