ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯಗಳನ್ನು ವಾಸಿ ಮಾಡಿಕೊಳ್ಳಿ

Last Updated 20 ಡಿಸೆಂಬರ್ 2022, 0:15 IST
ಅಕ್ಷರ ಗಾತ್ರ

ಗಾಯಗಳ ಆರೈಕೆ ವೈದ್ಯಕೀಯ ವಿಜ್ಞಾನಕ್ಕೆ ಒಂದು ಸವಾಲಿನ ಸಂಗತಿ. ಅವುಗಳ ಚಿಕಿತ್ಸೆಯಲ್ಲಿ ಸೋಂಕು ತಗುಲದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ. ಕೆಲವು ಗಾಯಗಳಿಗೆ ಆಸ್ಪತ್ರೆಯಲ್ಲಿಯೇ ಆರೈಕೆ ಬೇಕಾಗುತ್ತದೆ. ಇನ್ನು ಕೆಲವನ್ನು ಮನೆಯಲ್ಲಿಯೇ ನಿರ್ವಹಿಸಬಹುದು. ಆದರೆ ಗಾಯಗಳನ್ನು ಕಾಳಜಿ ಮಾಡುವಾಗ ಯಾವ ಅಂಶಗಳು ಮುಖ್ಯ ಎಂಬುವುದನ್ನು ಪ್ರತಿಯೊಬ್ಬರೂ ತಿಳಿದಿರುವುದು ಸೂಕ್ತ. ಏಕೆಂದರೆ ಗಾಯಗಳನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ಅದು ವ್ಯಕ್ತಿಯ ಸರ್ವತೋಮುಖ ಆರೋಗ್ಯದ ಮೇಲೆಯೂ ಪರಿಣಾಮ ಬೀರಬಹುದು.

ಗಾಯಗಳಿಗೆ ಕಾರಣ ಹಲವಾರು. ಹಾಗೆ ನೋಡಿದರೆ, ವೈದ್ಯರು ಚರ್ಮದ ಮೇಲೆ ಗಾಯ ಮಾಡಿಯೇ ಶಸ್ತ್ರಚಿಕಿತ್ಸೆಯನ್ನು ಆರಂಭಿಸುವುದು. ಆದರೆ ಅದೊಂದು ಸ್ವಚ್ಛ, ನಂಜುರಹಿತ ವಾತಾವರಣದಲ್ಲಿ ಮಾಡಿದ ಸರಳರೇಖೆಯಂತಹ ಗಾಯ. ಆಸ್ಪತ್ರೆಯಲ್ಲಿ ವೈದ್ಯರ ಮಾರ್ಗದರ್ಶನದಲ್ಲಿ ಅದರ ಆರೈಕೆಯಾಗುವುದರಿಂದ ಅಲ್ಲಿ ಸೋಂಕಿಗೆ ಅವಕಾಶ ಬಹಳ ಕಡಿಮೆ. ಹಾಗಾಗಿಯೇ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯಲ್ಲಿ ಮಾಡಿದ ಗಾಯಗಳು ನಿಗದಿತ ಸಮಯದೊಳಗೆ ಗುಣವಾಗುತ್ತವೆ. ಆದರೆ, ಇತರೆ ಕಾರಣಗಳಿಂದ ಸಂಭವಿಸುವ ಗಾಯಗಳು ಗುಣವಾಗುವುದು ಅಷ್ಟು ಸರಳವಲ್ಲ; ಅಲ್ಲಿ ಹಲವಾರು ಅಂಶಗಳ ಪಾತ್ರವಿರುತ್ತದೆ.

ಗಾಯ ಸಂಭವಿಸಲು ಇಂತಹದ್ದೇ ಕಾರಣ ಎಂದಿಲ್ಲ. ರಸ್ತೆ ಅಪಘಾತಗಳಾದಾಗ, ಸಮತೋಲನ ತಪ್ಪಿ ಬಿದ್ದಾಗ, ಮನೆ ಅಥವಾ ಕಾರ್ಖಾನೆಗಳಲ್ಲಿ ಬೆಂಕಿ ಅಪಘಾತಗಳಾದಾಗ, ಮೊನಚಾದ ಉಪಕರಣಗಳು ಚುಚ್ಚಿದಾಗ, ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಅವಘಡಗಳಾದಾಗ, ಮನೆಯ ಸ್ನಾನದ ಕೊಠಡಿ/ಶೌಚಾಲಯಗಳಲ್ಲಿ ಜಾರಿ ಬಿದ್ದಾಗ, ನಾಯಿ ಮತ್ತಿತರ ಪ್ರಾಣಿಗಳು ಕಚ್ಚಿದಾಗ – ಇಂತಹ ಸಂದರ್ಭಗಳಲ್ಲಿ ಗಾಯಗಳಾಗುವುದು ಸಾಮಾನ್ಯ.

ಗಾಯವಾದ ತಕ್ಷಣ ಏನು ಮಾಡಬೇಕು?

ಸಣ್ಣ ಪುಟ್ಟ ಗಾಯಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ಮಾಡಬಹುದು. ಆದರೆ ದೊಡ್ಡ ಪ್ರಮಾಣದ ಆಳವಾದ, ತೀವ್ರವಾದ ರಕ್ತಸ್ರಾವವಿರುವ ಗಾಯಗಳಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಬೇಕಾಗುತ್ತದೆ. ಗಾಯವಾದ ತಕ್ಷಣ ಸ್ವಚ್ಛವಾದ ನೀರಿನಲ್ಲಿ ತೊಳೆಯಬೇಕು. ರಕ್ತಸ್ರಾವವಾಗುವ ಭಾಗವನ್ನು ಒತ್ತಿ ಹಿಡಿಯಬೇಕು. ಮಂಜುಗಡ್ಡೆಯ ತುಂಡುಗಳನ್ನು ರಕ್ತಸ್ರಾವವಾಗುವ ಭಾಗದಲ್ಲಿ ಒತ್ತಿ ಹಿಡಿದರೆ, ಸ್ರಾವವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು. ಸ್ವಚ್ಛವಾದ ಬಟ್ಟೆಯನ್ನು ಬಿಗಿಯಾಗಿ ಬಿಗಿದೂ ರಕ್ತಸ್ರಾವವನ್ನು ನಿಯಂತ್ರಿಸಬಹುದು. ಹತ್ತು ನಿಮಿಷಗಳವರೆಗೂ ನಿಯಂತ್ರಣಕ್ಕೆ ಬರದಿದ್ದಲ್ಲಿ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಬೇಕು. ಸುಟ್ಟ ಗಾಯಗಳ ಮೇಲೆ ತಕ್ಷಣ ಸ್ವಚ್ಛವಾದ ತಣ್ಣನೆಯ ನೀರನ್ನು ಸುರಿಯುವುದು ಅಂಗಾಂಶಗಳು ಸುಡುವ ಪ್ರಕ್ರಿಯೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸುತ್ತದೆ. ನಂಜುನಿವಾರಕ ಮುಲಾಮುಗಳು ಲಭ್ಯವಿದ್ದರೆ, ಅದನ್ನು ಗಾಯದ ಮೇಲೆ ಲೇಪಿಸಬೇಕು. ಯಾವುದೇ ಗಾಯ ಮತ್ತು ಅದರ ಆಸುಪಾಸು ಮಣ್ಣು ಮತ್ತು ಇತರ ದೂಳಿನ ಕಣಗಳ ಸಂಪರ್ಕಕ್ಕೇನಾದರೂ ಬಂದಿದ್ದಲ್ಲಿ ಧನುರ್ವಾಯು ಕಾಯಿಲೆಯ ವಿರುದ್ಧ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು. ಗಾಯವು ಅಗಲವಾಗಿ, ಆಳವಾಗಿದ್ದಲ್ಲಿ ಅಂಚುಗಳನ್ನು ಸಮೀಪಕ್ಕೆ ತಂದು ಹೊಲಿಗೆ ಹಾಕುವುದು ಗಾಯ ಶೀಘ್ರವಾಗಿ ಗುಣವಾಗಲು ನೆರವಾಗುತ್ತದೆ.

ಕೆಲವು ಗಾಯಗಳಿಗೆ ನಿತ್ಯವೂ ಸ್ವಚ್ಛಗೊಳಿಸುವುದು (ಡ್ರೆಸ್ಸಿಂಗ್) ಅಗತ್ಯವೆನಿಸುತ್ತದೆ. ಆದರೆ ಆ ಪ್ರಕ್ರಿಯೆ ನಂಜುರಹಿತ ಸಲಕರಣೆಗಳಿಂದ ಆಗಬೇಕು. ನುರಿತ ವೈದ್ಯರು ಅಥವಾ ಶುಶ್ರೂಷಕ ಸಿಬ್ಬಂದಿ ಸೋಂಕು ತಗುಲದಂತೆ ಗಾಯವನ್ನು ಎಚ್ಚರಿಕೆಯಿದ ಸ್ವಚ್ಛಗೊಳಿಸುತ್ತಾರೆ. ಅಂತಹ ಸಂದರ್ಭದಲ್ಲಿ ದಿನವೂ ಹತ್ತಿರದ ಆಸ್ಪತ್ರೆಗೆ ತೆರಳಿ ಅಲ್ಲಿ ಸ್ವಚ್ಛಗೊಳಿಸಿಕೊಳ್ಳುವುದು ಸೂಕ್ತ. ಇನ್ನು ಕೆಲವು ಆಳವಿರದ ಗಾಯಗಳನ್ನು ಕೇವಲ ಮುಲಾಮು ಲೇಪಿಸಿ ಹಾಗೆಯೇ ತೆರೆದು ಬಿಡುವುದು ಉತ್ತಮ. ಗಾಯವು ಚಲನೆಯಿರುವ ಅಥವಾ ಘರ್ಷಣೆಗೆ ಒಳಗಾಗುವ ದೇಹದ ಭಾಗದಲ್ಲಿದ್ದರೆ ಅವುಗಳನ್ನು ಸ್ವಚ್ಛ ಬಟ್ಟೆಯಿಂದ (ಡ್ರೆಸ್ಸಿಂಗ್) ಮುಚ್ಚುವುದು ಉತ್ತಮ. ಆದರೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಗಾಯಗಳ ಗುಣವಾಗುವಿಕೆ ಅದರ ಆಳ, ಅಗಲ, ಮತ್ತಿತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ರೋಗಿಯ ದೇಹಸ್ಥಿತಿ, ಮುಖ್ಯವಾಗಿ ಆತನ ರಕ್ತದ ಸಕ್ಕರೆ ಅಂಶ, ಪೌಷ್ಟಿಕಾಂಶದ ಮಟ್ಟ, ರೋಗನಿರೋಧಕ ಶಕ್ತಿ ಮೊದಲಾದ ಅಂಶಗಳು ಗಾಯ ಗುಣವಾಗುವಿಕೆಯ ಮೇಲೆ ಪರಿಣಾಮ ಬೀರಬಲ್ಲವು.

ಗಾಯಗಳು ಗುಣವಾಗುವ ಪ್ರಕ್ರಿಯೆಯಲ್ಲಿ ತೊಡಕು ಉಂಟುಮಾಡುವ ಮುಖ್ಯ ಅಂಶವೆಂದರೆ ಸೋಂಕು. ವ್ಯಕ್ತಿ ಮಧುಮೇಹಿಯಾಗಿದ್ದರೆ ತಜ್ಞವೈದ್ಯರ ಮಾರ್ಗದರ್ಶನದಲ್ಲಿ ಸೂಕ್ತ ಔಷಧೋಪಚಾರದ ಮೂಲಕ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಬೇಕು. ಇಲ್ಲದಿದ್ದಲ್ಲಿ ಹೆಚ್ಚಾದ ರಕ್ತದ ಸಕ್ಕರೆ ಅಂಶವು ಸೂಕ್ಷ್ಮಾಣುಗಳ ಬೆಳವಣಿಗೆಗೆ ಪೂರಕವಾಗಿರುವುದರಿಂದ ಗಾಯಗಳು ಬಹುಬೇಗ ಸೋಂಕಿಗೆ ತುತ್ತಾಗುತ್ತವೆ. ಸ್ವಚ್ಛವಿಲ್ಲದ ಕೈಗಳಿಂದ ಅಥವಾ ಸಲಕರಣೆಗಳಿಂದ ಗಾಯಗಳನ್ನು ಸ್ಪರ್ಶಿಸುವುದೂ ಸೋಂಕಿಗೆ ಕಾರಣವಾಗಬಹುದು. ಹಾಗಾಗಿ ಆ ಬಗ್ಗೆ ಎಚ್ಚರವಹಿಸಬೇಕು.

ಗುಣವಾಗುತ್ತಿರುವ ಗಾಯಗಳಲ್ಲಿ ಊತ, ನೋವು, ಕೀವು, ದುರ್ನಾತ ಅಥವಾ ವ್ಯಕ್ತಿಗೆ ಜ್ವರ ಬರುವುದು ಮೊದಲಾದುವು ಗಾಯಕ್ಕೆ ಸೋಂಕು ತಗುಲಿರಬಹುದು ಎಂಬ ಸೂಚನೆಯನ್ನು ಕೊಡುತ್ತವೆ. ಇಂತಹ ಸಂದರ್ಭಗಳಲ್ಲಿ ವೈದ್ಯರ ಸಲಹೆ ಅತ್ಯಗತ್ಯ.

ಯಾವುದೇ ಗಾಯ ಗುಣವಾಗುವ ಪ್ರಕ್ರಿಯೆಯಲ್ಲಿ ಮೂರು ಹಂತಗಳಿರುತ್ತವೆ. ಮೊದಲು ಉರಿಯೂತ ಪ್ರಕ್ರಿಯೆ ಆರಂಭವಾಗಿ ಬಿಳಿಯ ರಕ್ತಕಣಗಳು ಅಲ್ಲಿರಬಹುದಾದ ಸೂಕ್ಷ್ಮಾಣುಗಳನ್ನು ಹೊಡೆದೋಡಿಸಿದರೆ, ಕಿರುಬಿಲ್ಲೆಗಳು ರಕ್ತಸ್ರಾವವನ್ನು ನಿಲ್ಲಿಸಲು ಅಣಿಯಾಗುತ್ತವೆ.

ಒಂದೆರಡು ದಿನಗಳಲ್ಲಿ ಗಾಯವು ಗಾತ್ರದಲ್ಲಿ ಕುಗ್ಗುತ್ತದೆ. ನಂತರದ ಹಂತದಲ್ಲಿ ವಿವಿಧ ಪ್ರಕ್ರಿಯೆಗಳ ಪರಿಣಾಮವಾಗಿ ಮುರಿದು ತುಂಡಾದ ಸಂಯೋಜಕ ಅಂಗಾಂಶಗಳು ಪುನಃ ಹುಟ್ಟಿಕೊಳ್ಳುತ್ತವೆ. ಈ ಎಲ್ಲ ಅಂಗಾಂಶಗಳ ತಯಾರಿಗೆ ಮತ್ತು ಸದೃಢ ರೋಗನಿರೋಧಕ ವ್ಯವಸ್ಥೆಗೆ ಪ್ರೊಟೀನ್ ಅತ್ಯವಶ್ಯಕ. ಜೊತೆಗೆ ಕಬ್ಬಿಣಾಂಶ, ಕ್ಯಾಲ್ಸಿಯಂ, ಮೆಗ್ನಿಷಿಯಂ ಮೊದಲಾದ ಸೂಕ್ಷ್ಮ ಪೋಷಕಾಂಶಗಳ ಅಗತ್ಯತೆ ಇರುತ್ತದೆ. ಆದ್ದರಿಂದ ಗಾಯ ಗುಣವಾಗುವಲ್ಲಿ ಅಧಿಕ ಪ್ರೊಟೀನ್‍ಯುಕ್ತ ಪೌಷ್ಟಿಕ ಆಹಾರ ಸೇವನೆಯೂ ಪ್ರಮುಖವೆನಿಸುತ್ತದೆ. ಆ ಭಾಗಕ್ಕೆ ಸಾಕಷ್ಟು ಆಮ್ಲಜನಕದ ಪೂರೈಕೆಯೂ ಅತ್ಯಗತ್ಯ. ಹಾಗಾಗಿಯೇ ವ್ಯಕ್ತಿ ರಕ್ತಹೀನತೆಯಿಂದ ಬಳಲುತ್ತಿದ್ದರೆ ಅಥವಾ ಧೂಮಪಾನಿಯಾಗಿದ್ದರೆ ಗಾಯ ಗುಣವಾಗುವ ಪ್ರಕ್ರಿಯೆ ಕುಂಠಿತಗೊಳ್ಳುತ್ತದೆ. ದೇಹ ಮತ್ತು ಮನಸ್ಸಿಗೆ ಅವಿನಾಭಾವ ಸಂಬಂಧ ಇರುವುದರಿಂದ ವ್ಯಕ್ತಿಯ ಮಾನಸಿಕ ಸ್ಥಿತಿಯೂ ಬಹಳವೇ ಮುಖ್ಯ. ಚಿಂತೆ ಒತ್ತಡಗಳಿಲ್ಲದ, ಸಕಾರತ್ಮಕ ವಿಚಾರಗಳಿರುವ ಪ್ರಫುಲ್ಲ ಮನಸ್ಸೂ ಗಾಯದ ಶೀಘ್ರ ಗುಣವಾಗುವಿಕೆಗೆ ಪೂರಕವಾಗಬಲ್ಲದು. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT