ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆ ಸುತ್ತಿನ ಸುತ್ತಮುತ್ತ

Last Updated 25 ಜುಲೈ 2022, 19:30 IST
ಅಕ್ಷರ ಗಾತ್ರ

‘ರಾತ್ರಿ ಮಲಗಿದಾಗ ಚೆನ್ನಾಗಿಯೇ ಇದ್ದೆ. ಬೆಳಗ್ಗೆ ಎದ್ದರೆ ತಲೆಯೆಲ್ಲ ಹಗುರವಾದ ಹಾಗಿತ್ತು; ಕಣ್ಣು ಮಂಜಾಗಿತ್ತು; ಸುತ್ತಮುತ್ತಲಿನ ಗೋಡೆಗೆಳೆಲ್ಲ ಗಿರಕಿ ಹೊಡೆಯುತ್ತಿದ್ದವು. ಹೊಟ್ಟೆ ತೊಳಸಿದಂತಾಯಿತು. ಹೆಜ್ಜೆ ಇಟ್ಟರೆ ಬಿದ್ದುಬಿಡುತ್ತೇನೆಂಬ ಭಯ. ಕಣ್ಣು ಮುಚ್ಚಿಕೊಂಡು ಹಾಗೆಯೇ ಮಂಚದ ಮೇಲೆ ಕೂರುವಂತಾಯಿತು. ಸ್ವಲ್ಪ ಕಾಲ ಕುಳಿತ ನಂತರ ಕಣ್ಣು ತೆರೆದಾಗ ತಲೆಸುತ್ತಿನ ಅನುಭವ ಕಡಿಮೆ ಆಯಿತಾದರೂ ಇನ್ನೂ ಪೂರ್ತಿಯಾಗಿ ವಾಸಿಯಾಗಿಲ್ಲ’. ಜೀವನದಲ್ಲಿ ಒಮ್ಮೆಯಾದರೂ ಈ ಅನುಭವ ಆಗದವರು ವಿರಳ.

ತಲೆಸುತ್ತು, ತಲೆತಿರುಗುವಿಕೆ, ತಲೆ ಗಿರಕಿ ಹೊಡೆದ ಅನುಭವ, ಶಿರೋಭ್ರಮಣ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ‘ವರ್ಟೈಗೊ’ (Vertigo) ಸಮಸ್ಯೆ ಬಹಳ ಸಾಮಾನ್ಯ. ಬಹುತೇಕ ಮಂದಿಗೆ ಇದು ತಾತ್ಕಾಲಿಕ ಅನುಭವ. ಆದರೆ ಈ ಸಮಸ್ಯೆ ಗಂಭೀರವಾದರೆ ದೀರ್ಘಕಾಲಿಕವಾಗಿಯೂ ಕಾಡಬಹುದು. ತಲೆಸುತ್ತಿನ ವೇಳೆ ಸುಮ್ಮನೆ ಒಂದೆಡೆ ನಿಂತಿದ್ದರೂ ನಾವೇ ತಿರುಗುತ್ತಿರುವಂತೆ ಅನಿಸಬಹುದು; ಇಲ್ಲವೇ, ನಮ್ಮ ಸುತ್ತಮುತ್ತಲಿನ ಗೋಡೆಗಳು, ವಸ್ತುಗಳು ಗಿರಕಿ ಹೊಡೆಯುತ್ತಿರುವಂತೆ ಭಾಸವಾಗಬಹುದು. ವಯಸ್ಸಾದಂತೆಲ್ಲಾ ಈ ಸಮಸ್ಯೆ ಅಧಿಕವಾಗುತ್ತದೆ. ತಲೆಸುತ್ತು ಬಂದಾಗ ಕೆಲವೊಮ್ಮೆ ‘ಸ್ವಲ್ಪ ನಡೆದರೆ ತಂತಾನೇ ಸರಿಹೋಗುತ್ತದೆ’ ಎಂದು ಭಾವಿಸಿ, ಕೆಲ ಹೆಜ್ಜೆಗಳನ್ನಿಟ್ಟು, ಪ್ರಜ್ಞೆತಪ್ಪಿ ಬಿದ್ದು ಗಾಯಗೊಂಡವರಿದ್ದಾರೆ. ಸುಲಭವಾಗಿ ನಿರ್ಲಕ್ಷಿಸಲಾಗದ, ಉಪೇಕ್ಷೆ ಮಾಡಬಾರದಾದ ಸಮಸ್ಯೆಗಳಲ್ಲಿ ತಲೆಸುತ್ತು ಒಂದು.

ಮನುಷ್ಯಜೀವಿ ಮೂಲತಃ ಚತುಷ್ಪಾದಿಗಳಿಂದ ವಿಕಾಸ ವಾದರೂ ಎರಡು ಕಾಲಿನ ಮೇಲೆ ನಿಲ್ಲುವ, ನಡೆಯುವ ಹಂತಕ್ಕೆ ಏರಿದ ಪ್ರಾಣಿ. ಇದರ ಲಾಭಗಳೂ ಕೆಲವು; ಅಪಾಯಗಳೂ ಹಲವು. ನಾಲ್ಕು ಚಕ್ರದ ಕಾರು ಓಡಿಸುವಾಗ ನಮಗೆ ಸಮತೋಲನದ ಅಗತ್ಯ ಇರುವುದಿಲ್ಲ. ಆದರೆ ಎರಡು ಚಕ್ರದ ಬೈಸಿಕಲ್ ಅಥವಾ ಬೈಕ್ ಓಡಿಸುವವರಿಗೆ ಬೀಳದಂತೆ ಸಮತೋಲನವನ್ನು ನಿರ್ವಹಿಸುವುದು ಮುಖ್ಯ. ಅದೇ ರೀತಿಯಲ್ಲಿ ದ್ವಿಪಾದಿಯಾದ ಮನುಷ್ಯರಲ್ಲಿ ಬೀಳದಂತೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ. ಇದನ್ನು ನಿರ್ವಹಿಸಲು ನಮ್ಮ ಶರೀರ ಹಲವಾರು ತಯಾರಿ ಮಾಡಿಕೊಂಡಿದೆ. ಶರೀರದ ಸಮತೋಲನವನ್ನು ಕಾಯ್ದುಕೊಳ್ಳುವ ಪ್ರಮುಖ ಅಂಗಗಳು ನಮ್ಮ ಒಳಕಿವಿಯಲ್ಲಿವೆ. ಪರಸ್ಪರ ಲಂಬಕೋನದಲ್ಲಿರುವ, ತಮ್ಮ ಒಡಲಿನ ಸ್ವಲ್ಪಭಾಗದಲ್ಲಿ ದ್ರವ ತುಂಬಿರುವ ಮೂರು ಅರ್ಧವರ್ತುಲಾಕಾರದ ಕೊಳವೆಗಳು, ಅದರ ಬದಿಯ ಎರಡು ಗಟ್ಟಿ ಚೀಲಗಳು, ಇವುಗಳಿಂದ ಮಾಹಿತಿಯನ್ನು ಒಯ್ಯುವ ನರಗಳು ದೇಹದ ಸಮತೋಲನ ನಿರ್ವಹಣೆಯ ಮುಖ್ಯ ಭಾಗಗಳು. ಅರ್ಧವರ್ತುಲಾಕಾರದ ಕೊಳವೆಗಳಲ್ಲಿನ ದ್ರವದ ಮಟ್ಟವನ್ನು ಗ್ರಹಿಸುವ ನರಗಳು, ವ್ಯಕ್ತಿಯ ತಲೆ ಯಾವ ಕೋನದಲ್ಲಿ ನಿಂತಿದೆ ಎಂದು ಮಿದುಳಿಗೆ ತಿಳಿಸುತ್ತವೆ. ಇಂತಹ ವಿಶಿಷ್ಟ ಮಾಹಿತಿಯನ್ನು ಕ್ರೋಡೀಕರಿಸುವ ಮಿದುಳಿನ ಭಾಗಕ್ಕೆ ಮತ್ತಷ್ಟು ಮಾಹಿತಿ ಕಣ್ಣುಗಳಿಂದ ಮತ್ತು ದೇಹದ ಕೀಲುಗಳಿಂದ ಬರುತ್ತದೆ. ಇವೆಲ್ಲವನ್ನೂ ಸಂಸ್ಕರಿಸುವ ಮಿದುಳು ಶರೀರದ ಸ್ಥಿತಿಯನ್ನು ಕ್ಷಣಮಾತ್ರದಲ್ಲಿ ನಿರ್ಧರಿಸಿ, ಯಾವುದೇ ಅಸಮತೋಲನವನ್ನು ಸರಿಪಡಿಸುವ ಸೂಚನೆಗಳನ್ನು ದೇಹದ ಮಾಂಸಖಂಡಗಳಿಗೆ ನೀಡುತ್ತದೆ. ಅದಕ್ಕೇ, ದೇಹ ಆಯ ತಪ್ಪಿ ಒಂದೆಡೆ ವಾಲಿದರೆ ಕೂಡಲೇ ಆ ಬದಿಯ ಕೈ ದೂರಕ್ಕೆ ಚಲಿಸಿ, ಭುಜದ ಮಾಂಸಖಂಡಗಳು ಗಟ್ಟಿಯಾಗಿ, ಹಸ್ತದ ಭಾಗ ಅಗಲವಾಗುತ್ತದೆ. ಇದು ಮಿದುಳಿನ ಮಿಂಚಿನ ವೇಗದ ಮಾಹಿತಿ ಸಂಸ್ಕರಣೆಗೆ ಸಾಕ್ಷಿ.

ಸಮತೋಲನ ನಿರ್ವಹಿಸುವ ಕಿವಿಯ ಅಂಗಗಳು ಅಥವಾ ಅದನ್ನು ಸಂಸ್ಕರಿಸುವ ಮಿದುಳಿನ ಭಾಗದಲ್ಲಿ ಏರುಪೇರಾದರೆ ತಲೆಸುತ್ತು ಬರುತ್ತದೆ. ಒಳಕಿವಿಯ ಭಾಗಗಳಲ್ಲಿ ಸಮಸ್ಯೆ ಉಂಟಾದರೆ ಕಿವಿಯಲ್ಲಿ ‘ಗುಂಯ್’ ಸದ್ದು, ತಾತ್ಕಾಲಿಕ ಕಿವುಡು, ಹೊಟ್ಟೆ ತೊಳಸುವುದು, ವಾಂತಿ, ಕಣ್ಣಿನ ಪಾಪೆಗಳ ವೇಗದ ಚಲನೆ, ಅಸಮರ್ಪಕ ನಡಿಗೆ ಮೊದಲಾದವು ಕಾಣುತ್ತವೆ. ಆರಂಭದಲ್ಲಿ ಇವು ತೀವ್ರ ಸಮಸ್ಯೆ ತಂದೊಡ್ಡುತ್ತವೆ. ಆದರೆ ಮಿದುಳು ಈ ಸಮಸ್ಯೆಯನ್ನು ಗ್ರಹಿಸಿ, ಇತರ ಮೂಲಗಳಿಂದ ಅಧಿಕ ಮಾಹಿತಿ ಸಂಗ್ರಹಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡುತ್ತದೆ. ಈ ವೇಳೆಗೆ ಒಳಕಿವಿಯ ತಾತ್ಕಾಲಿಕ ಸಮಸ್ಯೆ ಪರಿಹಾರವಾದರೆ ತಲೆಸುತ್ತು ತಾನಾಗಿಯೇ ನಿಲ್ಲುತ್ತದೆ. ಕೆಲವೊಮ್ಮೆ ಇದರ ಪರಿಹಾರಕ್ಕೆ ಕೆಲವು ಮನೆಮದ್ದು, ಔಷಧಗಳು, ಸಾಕಷ್ಟು ವಿಶ್ರಾಂತಿ ನೆರವಾಗುತ್ತವೆ. ಆದರೆ, ಒಳಕಿವಿಯ ಸಮಸ್ಯೆ ತೀವ್ರ ಸ್ವರೂಪದ್ದಾಗಿದ್ದಲ್ಲಿ, ಅಥವಾ ಸಮತೋಲನ ನಿರ್ವಹಣೆಯ ಅಂಗಗಳ, ನರಗಳ ಕಾಯಿಲೆಗೆ ಸಂಬಂಧಿಸಿದ್ದಾಗಿದ್ದಲ್ಲಿ, ಇಲ್ಲವೇ ಮಿದುಳಿನ ಮಾಹಿತಿ ಸಂಸ್ಕರಣೆಯ ಭಾಗ ತೊಂದರೆಗೆ ಒಳಗಾಗಿದ್ದಲ್ಲಿ ತಲೆಸುತ್ತು ಪರಿಹಾರವಾಗುವುದಿಲ್ಲ; ಬದಲಿಗೆ ಉಲ್ಬಣಿಸಬಹುದು. ಅನತಿಕಾಲದಲ್ಲಿ ಪರಿಹಾರವಾಗದ ಅಥವಾ ಪದೇ ಪದೇ ಕಾಡುವ ತಲೆಸುತ್ತನ್ನು ನಿರ್ಲಕ್ಷಿಸುವಂತಿಲ್ಲ. ಇದರ ಕಾರಣವನ್ನು ಹುಡುಕಿ, ಸೂಕ್ತ ಪರಿಹಾರ ಕಂಡುಕೊಳ್ಳಲು ಮೊದಲು ಕಿವಿಯ ತಜ್ಞರನ್ನು, ಅಗತ್ಯವಾದರೆ ಮಿದುಳಿನ ತಜ್ಞವೈದ್ಯರನ್ನು ಕಾಣಬೇಕು. ತಲೆಸುತ್ತಿನ ನಿಖರ ಕಾರಣವನ್ನು ಪತ್ತೆ ಮಾಡಬಲ್ಲ ಹಲವಾರು ಪರೀಕ್ಷೆಗಳಿವೆ. ಇವನ್ನು ಅಗತ್ಯಾನುಸಾರ ತಜ್ಞವೈದ್ಯರು ಮಾಡಿಸುತ್ತಾರೆ. ತಲೆಸುತ್ತಿನ ಕಾರಣ ಪತ್ತೆಯಾದ ನಂತರ ಅದರ ಚಿಕಿತ್ಸೆಗೆ ವೈಜ್ಞಾನಿಕ ವಿಧಾನಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT