ನವದೆಹಲಿ: ದೇಶದಲ್ಲಿರುವ ರಾಜತಾಂತ್ರಿಕರ ಪೈಕಿ 41 ಮಂದಿಯನ್ನು ಅಕ್ಟೋಬರ್ 10ರ ಒಳಗಾಗಿ ವಾಪಸ್ ಕರೆಸಿಕೊಳ್ಳುವಂತೆ ಕೆನಡಾಕ್ಕೆ ಭಾರತ ಸೂಚಿಸಿದೆ ಎಂದು ‘ಫೈನಾನ್ಶಿಯಲ್ ಟೈಮ್ಸ್’ ಮಂಗಳವಾರ ವರದಿ ಮಾಡಿದೆ.
ಈ ಕುರಿತು ಭಾರತ ಅಥವಾ ಕೆನಡಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ದೇಶದಲ್ಲಿರುವ ರಾಜತಾಂತ್ರಿಕರ ಸಂಖ್ಯೆಯನ್ನು ಕಡಿಮೆಗೊಳಿಸುವಂತೆ ಕೆನಡಾಕ್ಕೆ ಸೂಚನೆ ನೀಡಿದ 12 ದಿನಗಳ ನಂತರ, ಭಾರತ ಈ ಕ್ರಮ ಕೈಗೊಂಡಿದೆ. ದೇಶದಲ್ಲಿ ಕೆನಡಾದ 62 ರಾಜತಾಂತ್ರಿಕರಿದ್ದಾರೆ. ಈ ಪೈಕಿ 41 ಮಂದಿಯನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಭಾರತ ಸೆ.21ರಂದು ಸೂಚಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ಖಾಲಿಸ್ತಾನ ಪ್ರತ್ಯೇಕತಾವಾದಿ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂಬುದಾಗಿ ಪ್ರಧಾನಿ ಜಸ್ಟಿನ್ ಟ್ರೂಡೊ ಆರೋಪಿಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಒಡಕು ಮೂಡಿದ್ದು, ರಾಜತಾಂತ್ರಿಕ ಬಿಕ್ಕಟ್ಟು ಮುಂದುವರಿದಿದೆ.