<p><strong>ಶ್ರೀನಗರ:</strong> ಜಮ್ಮು ಮತ್ತು ಕಾಶ್ಮೀರದ ಕಿಶ್ತವಾಡ ಜಿಲ್ಲೆಯ ಛಾಟ್ರೂ ಪ್ರದೇಶದಲ್ಲಿ ಭಾನುವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಮೂಲದ ‘ಜೈಶ್–ಎ–ಮೊಹಮ್ಮದ್’ ಸಂಘಟನೆಯ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಇವರಲ್ಲಿ ಒಬ್ಬ ಜೆಇಎಂನ ಕಮಾಂಡರ್ ಸೈಫುಲ್ಲಾ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಇಲ್ಲಿನ ದಟ್ಟ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಕುರಿತು ಗುಪ್ತಚರ ಮಾಹಿತಿ ಆಧರಿಸಿ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಅರೆ ಸೇನಾ ಪಡೆ ಜಂಟಿಯಾಗಿ ಬೆಳಿಗ್ಗೆಯಿಂದಲೇ ಶೋಧ ಕಾರ್ಯಾಚರಣೆ ಆರಂಭಿಸಿದವು.</p><p>ಈ ವೇಳೆ ಭಯೋತ್ಪಾದಕರು ಭದ್ರತಾ ಪಡೆಗಳ ವಿರುದ್ಧ ಗುಂಡಿನ ದಾಳಿ ನಡೆಸಿದರು. ಅದಕ್ಕೆ ಪ್ರತಿಯಾಗಿ ಗುಂಡಿನ ದಾಳಿ ನಡೆಸಲಾಯಿತು. ಈ ವೇಳೆ ಮೂವರು ಭಯೋತ್ಪಾದಕರು ಹತರಾದರು. ಎನ್ಕೌಂಟರ್ ನಡೆದ ಸ್ಥಳದಿಂದ ಎರಡು ಎಕೆ–47 ರೈಫಲ್ಗಳು, ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. </p><p>ಪ್ರಾಥಮಿಕ ಮಾಹಿತಿ ಪ್ರಕಾರ, ಹತರಾದ ಭಯೋತ್ಪಾದಕರು ಪಾಕಿಸ್ತಾನಿ ಪ್ರಜೆಗಳು ಮತ್ತು ನಿಷೇಧಿತ ‘ಜೈಶ್–ಎ–ಮೊಹಮ್ಮದ್’ ಸಂಘಟನೆ ಸದಸ್ಯರು ಎಂಬುದು ಗೊತ್ತಾಗಿದೆ ಎಂದು ಅವರು ತಿಳಿಸಿದ್ದಾರೆ.</p><p>‘ಭದ್ರತಾ ಪಡೆಗಳು ಎನ್ಕೌಂಟರ್ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಿ, ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿವೆ’ ಎಂದು ಸೇನೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ. </p><p><strong>ಐದು ವರ್ಷಗಳ ಹಿಂದೆ ನುಸುಳಿದ್ದ ಸೈಫುಲ್ಲಾ:</strong></p><p>ಕುಖ್ಯಾತ ಭಯೋತ್ಪಾದಕನಾಗಿದ್ದ ಜೆಇಎಂನ ಕಮಾಂಡರ್ ಸೈಫುಲ್ಲಾ ಸುಮಾರು ಐದು ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿದ್ದ ಎಂದು ವರದಿಯಾಗಿದೆ. ಅಂದಿನಿಂದಲೂ ಈ ಪ್ರದೇಶದಲ್ಲಿ ಸಕ್ರಿಯನಾಗಿದ್ದ ಈತ, ಭದ್ರತಾ ಪಡೆಗಳ ಮೇಲೆ ನಡೆದ ಹಲವು ಮಾರಕ ದಾಳಿಗಳ ಸೂತ್ರಧಾರನಾಗಿದ್ದ. 2024ರಲ್ಲಿ ನಾಲ್ವರು ಸೈನಿಕರನ್ನು ಹತ್ಯೆ ಮಾಡಿದ ದಾಳಿಯಲ್ಲಿ ಈತನ ಪಾತ್ರ ಪ್ರಮುಖವಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಹಲವು ಎನ್ಕೌಂಟರ್ಗಳ ವೇಳೆ ಈತ ತಪ್ಪಿಸಿಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. </p><p><strong>ಜಮ್ಮುವಿನಲ್ಲಿ ಹೆಚ್ಚುತ್ತಿರುವ ಉಗ್ರ ಚಟುವಟಿಕೆ:</strong></p><p>ಕಿಶ್ತವಾಡ ಸೇರಿದಂತೆ ಜಮ್ಮುವಿನ ವಿವಿಧೆಡೆ ಇತ್ತೀಚಿಗೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಕಾಶ್ಮೀರಕ್ಕೆ ಹೋಲಿಸಿದರೆ ಹೆಚ್ಚು ಶಾಂತಿಯುತ ಎಂದು ಪರಿಗಣಿಸಲಾಗಿದ್ದ ಜಮ್ಮುವಿನಲ್ಲಿ ಎರಡು ವರ್ಷಗಳಿಂದ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಹಲವು ಬಾರಿ ಘರ್ಷಣೆಗಳು ನಡೆದಿವೆ. ಕಿಶ್ತವಾಡ, ಉಧಂಪುರ, ಕಠುವಾ, ರಾಜೌರಿ, ಪೂಂಚ್ ಮತ್ತು ಇತರ ಜಿಲ್ಲೆಗಳಲ್ಲಿ ಘರ್ಷಣೆಗಳಾದ ವರದಿಗಳಿವೆ. </p><p>ಜೈಶ್–ಎ–ಮೊಹಮ್ಮದ್, ಲಷ್ಕರ್– ಎ–ತಯಬಾ ಮತ್ತು ಅವುಗಳ ಅಂಗ ಸಂಸ್ಥೆಗಳಂತಹ ಭಯೋತ್ಪಾದಕ ಗುಂಪುಗಳು ಇಲ್ಲಿನ ಅರಣ್ಯ ಪ್ರದೇಶಗಳನ್ನು ಬಳಸಿಕೊಂಡು ದಾಳಿಗಳನ್ನು ಮರು ಸಂಘಟಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಇವುಗಳನ್ನು ಭದ್ರತಾಪಡೆಗಳು ದಿಟ್ಟವಾಗಿ ಎದುರಿಸುತ್ತಿವೆ ಎಂದು ಅವು ಹೇಳಿವೆ.</p>.ಆಳ ಅಗಲ | ಭಯೋತ್ಪಾದನೆಯ 'ಹೊಸ' ಮುಖ: 'ವೈಟ್ ಕಾಲರ್' ಉಗ್ರರು.ಮಹಿಳೆಯನ್ನು ಹಗ್ಗದಲ್ಲಿ ಕಟ್ಟಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಎಸೆದರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ:</strong> ಜಮ್ಮು ಮತ್ತು ಕಾಶ್ಮೀರದ ಕಿಶ್ತವಾಡ ಜಿಲ್ಲೆಯ ಛಾಟ್ರೂ ಪ್ರದೇಶದಲ್ಲಿ ಭಾನುವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಮೂಲದ ‘ಜೈಶ್–ಎ–ಮೊಹಮ್ಮದ್’ ಸಂಘಟನೆಯ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಇವರಲ್ಲಿ ಒಬ್ಬ ಜೆಇಎಂನ ಕಮಾಂಡರ್ ಸೈಫುಲ್ಲಾ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಇಲ್ಲಿನ ದಟ್ಟ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಕುರಿತು ಗುಪ್ತಚರ ಮಾಹಿತಿ ಆಧರಿಸಿ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಅರೆ ಸೇನಾ ಪಡೆ ಜಂಟಿಯಾಗಿ ಬೆಳಿಗ್ಗೆಯಿಂದಲೇ ಶೋಧ ಕಾರ್ಯಾಚರಣೆ ಆರಂಭಿಸಿದವು.</p><p>ಈ ವೇಳೆ ಭಯೋತ್ಪಾದಕರು ಭದ್ರತಾ ಪಡೆಗಳ ವಿರುದ್ಧ ಗುಂಡಿನ ದಾಳಿ ನಡೆಸಿದರು. ಅದಕ್ಕೆ ಪ್ರತಿಯಾಗಿ ಗುಂಡಿನ ದಾಳಿ ನಡೆಸಲಾಯಿತು. ಈ ವೇಳೆ ಮೂವರು ಭಯೋತ್ಪಾದಕರು ಹತರಾದರು. ಎನ್ಕೌಂಟರ್ ನಡೆದ ಸ್ಥಳದಿಂದ ಎರಡು ಎಕೆ–47 ರೈಫಲ್ಗಳು, ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. </p><p>ಪ್ರಾಥಮಿಕ ಮಾಹಿತಿ ಪ್ರಕಾರ, ಹತರಾದ ಭಯೋತ್ಪಾದಕರು ಪಾಕಿಸ್ತಾನಿ ಪ್ರಜೆಗಳು ಮತ್ತು ನಿಷೇಧಿತ ‘ಜೈಶ್–ಎ–ಮೊಹಮ್ಮದ್’ ಸಂಘಟನೆ ಸದಸ್ಯರು ಎಂಬುದು ಗೊತ್ತಾಗಿದೆ ಎಂದು ಅವರು ತಿಳಿಸಿದ್ದಾರೆ.</p><p>‘ಭದ್ರತಾ ಪಡೆಗಳು ಎನ್ಕೌಂಟರ್ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಿ, ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿವೆ’ ಎಂದು ಸೇನೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ. </p><p><strong>ಐದು ವರ್ಷಗಳ ಹಿಂದೆ ನುಸುಳಿದ್ದ ಸೈಫುಲ್ಲಾ:</strong></p><p>ಕುಖ್ಯಾತ ಭಯೋತ್ಪಾದಕನಾಗಿದ್ದ ಜೆಇಎಂನ ಕಮಾಂಡರ್ ಸೈಫುಲ್ಲಾ ಸುಮಾರು ಐದು ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿದ್ದ ಎಂದು ವರದಿಯಾಗಿದೆ. ಅಂದಿನಿಂದಲೂ ಈ ಪ್ರದೇಶದಲ್ಲಿ ಸಕ್ರಿಯನಾಗಿದ್ದ ಈತ, ಭದ್ರತಾ ಪಡೆಗಳ ಮೇಲೆ ನಡೆದ ಹಲವು ಮಾರಕ ದಾಳಿಗಳ ಸೂತ್ರಧಾರನಾಗಿದ್ದ. 2024ರಲ್ಲಿ ನಾಲ್ವರು ಸೈನಿಕರನ್ನು ಹತ್ಯೆ ಮಾಡಿದ ದಾಳಿಯಲ್ಲಿ ಈತನ ಪಾತ್ರ ಪ್ರಮುಖವಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಹಲವು ಎನ್ಕೌಂಟರ್ಗಳ ವೇಳೆ ಈತ ತಪ್ಪಿಸಿಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. </p><p><strong>ಜಮ್ಮುವಿನಲ್ಲಿ ಹೆಚ್ಚುತ್ತಿರುವ ಉಗ್ರ ಚಟುವಟಿಕೆ:</strong></p><p>ಕಿಶ್ತವಾಡ ಸೇರಿದಂತೆ ಜಮ್ಮುವಿನ ವಿವಿಧೆಡೆ ಇತ್ತೀಚಿಗೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಕಾಶ್ಮೀರಕ್ಕೆ ಹೋಲಿಸಿದರೆ ಹೆಚ್ಚು ಶಾಂತಿಯುತ ಎಂದು ಪರಿಗಣಿಸಲಾಗಿದ್ದ ಜಮ್ಮುವಿನಲ್ಲಿ ಎರಡು ವರ್ಷಗಳಿಂದ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಹಲವು ಬಾರಿ ಘರ್ಷಣೆಗಳು ನಡೆದಿವೆ. ಕಿಶ್ತವಾಡ, ಉಧಂಪುರ, ಕಠುವಾ, ರಾಜೌರಿ, ಪೂಂಚ್ ಮತ್ತು ಇತರ ಜಿಲ್ಲೆಗಳಲ್ಲಿ ಘರ್ಷಣೆಗಳಾದ ವರದಿಗಳಿವೆ. </p><p>ಜೈಶ್–ಎ–ಮೊಹಮ್ಮದ್, ಲಷ್ಕರ್– ಎ–ತಯಬಾ ಮತ್ತು ಅವುಗಳ ಅಂಗ ಸಂಸ್ಥೆಗಳಂತಹ ಭಯೋತ್ಪಾದಕ ಗುಂಪುಗಳು ಇಲ್ಲಿನ ಅರಣ್ಯ ಪ್ರದೇಶಗಳನ್ನು ಬಳಸಿಕೊಂಡು ದಾಳಿಗಳನ್ನು ಮರು ಸಂಘಟಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಇವುಗಳನ್ನು ಭದ್ರತಾಪಡೆಗಳು ದಿಟ್ಟವಾಗಿ ಎದುರಿಸುತ್ತಿವೆ ಎಂದು ಅವು ಹೇಳಿವೆ.</p>.ಆಳ ಅಗಲ | ಭಯೋತ್ಪಾದನೆಯ 'ಹೊಸ' ಮುಖ: 'ವೈಟ್ ಕಾಲರ್' ಉಗ್ರರು.ಮಹಿಳೆಯನ್ನು ಹಗ್ಗದಲ್ಲಿ ಕಟ್ಟಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಎಸೆದರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>