ತುರುವೇಕೆರೆ: ತಾಲ್ಲೂಕಿನ ಹಲವೆಡೆ ಶುಕ್ರವಾರ ತಡರಾತ್ರಿ ಮಿಂಚು, ಬಿರುಗಾಳಿ ಸಹಿತ ಸುರಿದ ಭರಣಿ ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಶುಕ್ರವಾರ ಮಧ್ಯರಾತ್ರಿ ಒಂದು ಗಂಟೆಗೂ ಹೆಚ್ಚು ಹೊತ್ತು ಉತ್ತಮ ಮಳೆ ಸುರಿಯಿತು.
ಅಂರ್ತಜಲದ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ತೆಂಗು ಮತ್ತು ಅಡಿಕೆ ಬೆಳೆಗಳು ಒಣಗಿ ರೈತರು ಕಂಗಾಲಾಗಿದ್ದರು. ಈ ಮಳೆಯಿಂದ ವಾಣಿಜ್ಯ ಬೆಳೆಗಳು ಮತ್ತು ಭತ್ತಕ್ಕೆ ಅನುಕೂಲಕರವಾಗಿದೆ ಎಂದು ರೈತ ಚಂದ್ರಣ್ಣ ವಿಶ್ವಾಸ ವ್ಯಕ್ತಪಡಿಸಿದ್ದರು.
ತಾಲ್ಲೂಕಿನ ಸಂಪಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಗದೇವನಹಳ್ಳಿ, ಅಂಗರೇಖನಹಳ್ಳಿ, ಬಸವನಹಳ್ಳಿ, ಹಂಪಲಾಪುರ, ತಳವಾರನಹಳ್ಳಿ, ಮಲ್ಲೇನಹಳ್ಳಿ, ಮಾಸ್ಕನಹಳ್ಳಿ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.
ಕಸಬಾ ವ್ಯಾಪ್ತಿಯ ತುರುವೇಕೆರೆ, ತಾವರೇಕೆರೆ, ಪುರ, ಚಂಡೂರು, ಶ್ರೀರಾಂಪುರ, ತಾಳ್ಕೆರೆ ಹಾವಾಳ, ದಂಡಿನಶಿವರ ಹೋಬಳಿಯ ದಂಡಿನಶಿವರ, ಹಡವನಹಳ್ಳಿಯಲ್ಲಿ ಸಾಧಾರಣ ಮಳೆಯಾಗಿದೆ.
ಹುಲ್ಲೇಕೆರೆ, ಬಳ್ಳೆಕಟ್ಟೆ ಮತ್ತು ಹಟ್ಟಿಹಳ್ಳಿಯಲ್ಲಿ ಹದ ಮಳೆಯಾಗಿ ತೋಟದ ಸಾಲುಗಳಲ್ಲಿ ನೀರು ಸಂಗ್ರಹವಾಗಿದೆ ಎಂದು ಹುಲ್ಲೇಕೆರೆ ರೈತ ಎಚ್.ಬಿ.ಗಂಗಾಧರ್ ತಿಳಿಸಿದರು.
ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದು ವಿದ್ಯುತ್ ತಂತಿಗಳು ತುಂಡಾಗಿ ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯವಾಗಿತ್ತು. ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿಗಳು ಬೇಟಿ ನೀಡಿ ತೆರೆವು ಕಾರ್ಯ ಮಾಡಿದ್ದಾರೆ.
ಕಸಬಾ ವ್ಯಾಪ್ತಿಯ ಪುರ ಗ್ರಾಮದ ಯಶೋದಮ್ಮ ಅವರ ಮನೆಯ ಮಳೆಗೆ ಗೋಡೆ ಕುಸಿದು ಬಿದ್ದು ಮನೆಯ ಸಣ್ಣಪುಟ್ಟ ವಸ್ತುಗಳು ಹಾಳಾಗಿದೆ.