ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯನ ಅಧ್ಯಯನ |ಉಡ್ಡಯನಕ್ಕೆ ಭರದ ಸಿದ್ಧತೆ, ವಾಹಕ ತಪಾಸಣೆ ಪೂರ್ಣ: ಇಸ್ರೊ ಮಾಹಿತಿ

Published 30 ಆಗಸ್ಟ್ 2023, 8:07 IST
Last Updated 30 ಆಗಸ್ಟ್ 2023, 8:07 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರಯಾನ–3 ಯಶಸ್ಸಿನ ಬೆನ್ನಲ್ಲೇ ಸೂರ್ಯನ ಬಾಹ್ಯ ವಾತಾವರಣದ ಅಧ್ಯಯನಕ್ಕಾಗಿ ಇಸ್ರೊ ‘ಆದಿತ್ಯ–ಎಲ್‌ 1’ ಬಾಹ್ಯಾಕಾಶ ನೌಕೆಯನ್ನು ಉಡ್ಡಯನ ಮಾಡುವುದಕ್ಕೆ ಭರದಿಂದ ಸಿದ್ಧತೆ ನಡೆಸಿದೆ.

‘ಆದಿತ್ಯ–ಎಲ್‌ 1’ ಬಾಹ್ಯಾಕಾಶ ನೌಕೆಯ ಉಡ್ಡಯನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ವಾಹಕದ ತಪಾಸಣೆ ಪೂರ್ಣಗೊಂಡಿದೆ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಇಸ್ರೊ ಮಾಹಿತಿ ನೀಡಿದ್ದು, ಫೋಟೊಗಳನ್ನು ಹಂಚಿಕೊಂಡಿದೆ.

ಸೂರ್ಯನ ಅಧ್ಯಯನಕ್ಕಾಗಿ ಭಾರತ ಕಳುಹಿಸಲಿರುವ ಚೊಚ್ಚಲ ಯೋಜನೆ ಆದಿತ್ಯ–ಎಲ್‌1 ಅನ್ನು ಸೆಪ್ಟೆಂಬರ್‌ 2ರಂದು ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟಾದಿಂದ ಉಡ್ಡಯನವಾಗಲಿದೆ ಎಂದು ಇಸ್ರೊ ತಿಳಿಸಿದೆ.

ಸೂರ್ಯನ ಬಾಹ್ಯ ವಾತಾವರಣದ ಅಧ್ಯಯನ ನಡೆಸುವುದಕ್ಕೆ ಬೇಕಾದ ರೀತಿಯಲ್ಲಿ ಆದಿತ್ಯ ಎಲ್‌1 ಅನ್ನು ವಿನ್ಯಾಸಗೊಳಿಸಲಾಗಿದೆ. ಈ (ಎಲ್‌ 1) ಪ್ರದೇಶದಲ್ಲಿ ಉಪಗ್ರಹವನ್ನು ಇರಿಸಿ ಸೌರ ಮಾರುತದ ಅಧ್ಯಯನ ನಡೆಸಲಾಗುವುದು. ಎಲ್‌ ಎಂದರೆ, ಲಾಗ್ರೇಂಜ್‌ ಬಿಂದು. ಇದು ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣ ಬಲ ಸಮಾನವಾಗಿರುವ ಪ್ರದೇಶ. ಇಲ್ಲಿ ವೀಕ್ಷಣಾ ಉಪಗ್ರಹವನ್ನು ನಿಯೋಜಿಸಿದರೆ ಅದು ಅತ್ಯಂತ ಕಡಿಮೆ ಇಂಧನದಲ್ಲಿ ನೆಲೆ ನಿಲ್ಲಲು ಸಾಧ್ಯ. ಈ ಪ್ರದೇಶವು ಭೂಮಿಯಿಂದ 15 ಲಕ್ಷ ಕಿಲೋಮೀಟರ್‌ ದೂರದಲ್ಲಿದೆ.

ತೇಜೋಮಂಡಲದ ಅಧ್ಯಯನಕ್ಕಾಗಿ ವಿಸಿಬಲ್‌ ಎಮಿಶನ್‌ ಲೈನ್‌ ಕೊರೊನಾಗ್ರಾಫ್‌ (ವಿಇಎಲ್‌ಸಿ) ಎಂಬ ಉಪಕರಣವನ್ನು ಬೆಂಗಳೂರಿನ ಭಾರತೀಯ ಖಭೌತವಿಜ್ಞಾನ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಸೂರ್ಯನ ಅತಿನೇರಳೆ ಕಿರಣಗಳ ಅಧ್ಯಯನ ನಡೆಸುವ ಉಪಕರಣವನ್ನು ಪುಣೆಯ ಇಂಟರ್‌ ಯುನಿವರ್ಸಿಟಿ ಸೆಂಟರ್‌ ಫಾರ್‌ ಆಸ್ಟ್ರೊನಮಿ ಆ್ಯಂಡ್‌ ಆಸ್ಟ್ರೊಫಿಸಿಕ್ಸ್‌ ಅಭಿವೃದ್ಧಿಪಡಿಸಿದೆ.

ಸೂರ್ಯನ ಮೇಲ್ಮೈಯ ತಾಪ ಮಾನವು 6,000 ಡಿಗ್ರಿ ಸೆಲ್ಸಿಯಸ್‌ ಇದ್ದರೂ ತೇಜೋಮಂಡಲದ ತಾಪಮಾನವು 10 ಲಕ್ಷ ಡಿಗ್ರಿ ಸೆಲ್ಸಿಯಸ್‌ ವರೆಗೆ ತಲುಪಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ವಿಇಎಲ್‌ಸಿ ಉತ್ತರ ಕಂಡುಕೊಳ್ಳಲಿದೆ ಎಂದು ಇಸ್ರೊ ಹೇಳಿದೆ.

ಎಲ್‌1 ಬಿಂದುವಿನ ಕಕ್ಷೆಯಲ್ಲಿ ಆದಿತ್ಯ ಉಪಗ್ರಹವನ್ನು ಇರಿಸಲಾಗುವುದು. ಕಕ್ಷೆಯಲ್ಲೇ ಸುತ್ತುತ್ತಲೇ ಸೂರ್ಯನ ವಿದ್ಯಮಾನಗಳ ಮೇಲೆ ನಿಗಾ ಇರಿಸಲಿದೆ. ಈ ಉಪಗ್ರಹವನ್ನು ಯು.ಆರ್‌. ರಾವ್‌ ಉಪಗ್ರಹ ಕೇಂದ್ರ ಅಭಿವೃದ್ಧಿಪಡಿಸಿದ್ದು ಶ್ರೀಹರಿಕೋಟಾದ ಇಸ್ರೊ ಬಾಹ್ಯಾಕಾಶ ಕೇಂದ್ರಕ್ಕೆ ಈ ತಿಂಗಳ ಆರಂಭದಲ್ಲಿ ತರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT