ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಒಬ್ಬ ಸಿಖ್ ಪಂಜಾಬ್‌ ಮುಖ್ಯಮಂತ್ರಿಯಾಗಲಿ'-ಸಿಎಂ ಹೊಣೆ ನಿರಾಕರಿಸಿದ ಅಂಬಿಕಾ ಸೋನಿ

Last Updated 19 ಸೆಪ್ಟೆಂಬರ್ 2021, 9:02 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ನ ಮುಂದಿನ ಮುಖ್ಯಮಂತ್ರಿ ಸಿಖ್‌ ಸಮುದಾಯಕ್ಕೆ ಸೇರಿದವರು ಆಗಿರಬೇಕು ಎಂದು ಕಾಂಗ್ರೆಸ್‌ನ ಅಂಬಿಕಾ ಸೋನಿ ಭಾನುವಾರ ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಹೊಣೆಯನ್ನು ಅಂಬಿಕಾ ಅವರು ನಿರಾಕರಿಸಿದ್ದಾರೆ.

ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜ್ಯಸಭಾ ಸದಸ್ಯೆ ಅಂಬಿಕಾ ಸೋನಿ ಅವರನ್ನು ಆಯ್ಕೆ ಮಾಡಲು ಕಾಂಗ್ರೆಸ್‌ ವರಿಷ್ಠರು ನಿರ್ಧರಿಸಿದ್ದರು. ಆದರೆ, ಆ ಪ್ರಸ್ತಾಪವನ್ನು ನಿರಾಕರಿಸಿರುವ ಅವರು, 'ಚಂಡೀಗಢದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಉಸ್ತುವಾರಿಗಳು ಎಲ್ಲ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ. ಪಂಜಾಬ್‌ನ ಮುಖ್ಯಮಂತ್ರಿ ಒಬ್ಬ ಸಿಖ್‌ ಆಗಿರಬೇಕು' ಎಂದಿದ್ದಾರೆ.

ಪಂಜಾಬ್‌ನಲ್ಲಿ ರಾಜಕೀಯ ಬೆಳವಣಿಗೆಗಳ ನಡುವೆ ಅಂಬಿಕಾ ಸೋನಿ ಅವರು ನವದೆಹಲಿಯಲ್ಲಿ ಪಕ್ಷದ ಮುಖಂಡ ರಾಹುಲ್‌ ಗಾಂಧಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಪಂಜಾಬ್‌ ವಿಧಾನಸಭೆಗೆ ನಾಲ್ಕೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.

1969ರಲ್ಲಿ ಅಂಬಿಕಾ ಸೋನಿ ಅವರನ್ನು ಇಂದಿರಾ ಗಾಂಧಿ ಕಾಂಗ್ರೆಸ್‌ ಪಕ್ಷಕ್ಕೆ ಕರೆತಂದಿದ್ದರು. ಅಂಬಿಕಾ ತಂದೆ ದೇಶ ವಿಭಜನೆಯ ಸಮಯದಲ್ಲಿ ಅಮೃತಸರದ ಜಿಲ್ಲಾಧಿಕಾರಿಯಾಗಿದ್ದವರು ಹಾಗೂ ನೆಹರೂ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು. ಪಂಜಾಬ್‌ನ ಹೋಶಿಯಾರ್‌ಪುರ್‌ ಜಿಲ್ಲೆಯವರಾದ ಅಂಬಿಕಾ ಸೋನಿ, ಹಲವು ಬಾರಿ ಪಂಜಾಬ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಅವರು ಸಂಜಯ್‌ ಗಾಂಧಿ ಅವರೊಂದಿಗೂ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಆನಂದ್‌ಪುರ್‌ ಸಾಹಿಬ್‌ನಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಅವರು ಸೋಲು ಕಂಡಿದ್ದರು.

ಶನಿವಾರ ಸಂಜೆ ಕ್ಯಾಪ್ಟನ್‌ ಅಮರಿಂದರ್ ಸಿಂಗ್ ಅವರು ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. 'ಅಧಿಕಾರದ ಸಂಬಂಧ ನನಗೆ ಅಪಮಾನ ಮಾಡಲಾಗಿದೆ' ಎಂದು ಕ್ಯಾಪ್ಟನ್‌ ಬೇಸರ ವ್ಯಕ್ತಪಡಿಸಿದ್ದರು.

ನೂತನ ಮುಖ್ಯಮಂತ್ರಿ ಆಯ್ಕೆಯ ಕಸರತ್ತು ನಡೆಯುತ್ತಿರುವುದರ ಮಧ್ಯೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಟ್ವೀಟಿಸಿದ್ದು, ಸೇನೆಯ ಮಾಜಿ ಕ್ಯಾಪ್ಟನ್‌, ಪಕ್ಷದ ಗೌರವಾನ್ವಿತ ಮುಖಂಡರು, ಮುಂದೆಯೂ ಕಾಂಗ್ರೆಸ್‌ ಪಕ್ಷದ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಮುಂದುವರಿಯುವ ಭರವಸೆ ಇದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT