ಚೆನ್ನೈ: ಎಐಎಡಿಎಂಕೆಯ ಪ್ರಣಾಳಿಕೆಯು ಈ ಬಾರಿಯೂ ಜನಪ್ರಿಯ ಘೋಷಣೆಗಳ ಹಾದಿಯನ್ನು ಬಿಟ್ಟು ಹೋಗಿಲ್ಲ. ಬಡತನ ರೇಖೆಗಿಂತ ಕೆಳಗಿನ ಪಡಿತರ ಚೀಟಿ ಇರುವ ಎಲ್ಲರಿಗೂ ವಾಷಿಂಗ್ ಮಷಿನ್ ಮತ್ತು ಸೋಲಾರ್ ಅನಿಲ ಸ್ಟೌಗಳನ್ನು ಉಚಿತವಾಗಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಸರ್ಕಾರಿ ಉದ್ಯೋಗಿಗಳು ಇಲ್ಲದ ಬಡ ಕುಟುಂಬಗಳಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ಕೊಡುವ ಭರವಸೆಯನ್ನೂ ನೀಡಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಿಂದಕ್ಕೆ ಪಡೆಯುವಂತೆ, ಪೆಟ್ರೋಲ್, ಡೀಸೆಲ್ ದರ ಇಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಲಾಗಿದೆ. 2019ರ ಡಿಸೆಂಬರ್ನಲ್ಲಿ ಸಂಸತ್ತಿನಲ್ಲಿ ಸಿಎಎ ಮಂಡನೆಯಾದಾಗ ಎಐಎಡಿಎಂಕೆ ಅದನ್ನು ಬೆಂಬಲಿಸಿತ್ತು.
ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಒ.ಪನ್ನೀರಸೆಲ್ವಂ ಅವರು ಪಕ್ಷದ ಕೇಂದ್ರ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಡಿಎಂಕೆಯ ಪ್ರಣಾಳಿಕೆಯಲ್ಲಿ ಇರುವ ಕೆಲವು ಭರವಸೆಗಳು ಎಐಎಡಿಎಂಕೆ ಪ್ರಣಾಳಿಕೆಯಲ್ಲಿಯೂ ಇವೆ. ತಮ್ಮ ಯೋಚನೆಗಳನ್ನು ಡಿಎಂಕೆ ‘ಕದ್ದಿದೆ’ ಎಂದು ಕಮಲಹಾಸನ್ ನೇತೃತ್ವದ ಮಕ್ಕಳ್ ನೀಧಿ ಮಯ್ಯಂ ಕೂಡ ಟೀಕಿಸಿತ್ತು.
ಪ್ರಣಾಳಿಕೆಯಲ್ಲಿ ಏನಿದೆ?
*ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಆರು ಎಲ್ಪಿಜಿ ಸಿಲಿಂಡರ್ ಉಚಿತ
*ಮಹಿಳಾ ಮುಖ್ಯಸ್ಥರು ಇರುವ ಕುಟುಂಬಕ್ಕೆ ತಿಂಗಳಿಗೆ ₹1,500 ನೆರವು
*ಜಯಲಲಿತಾ ಹೆಸರಿನಲ್ಲಿ ವಸತಿ ಯೋಜನೆ: ಗ್ರಾಮೀಣ ಪ್ರದೇಶದ ವಸತಿರಹಿತರಿಗೆ ಕಾಂಕ್ರೀಟ್ ಮನೆ
*ಸರ್ಕಾರಿ ಬಸ್ಗಳ ಟಿಕೆಟ್ ದರದಲ್ಲಿ ಮಹಿಳೆಯರಿಗೆ ರಿಯಾಯಿತಿ