ಲೇಹ್: ವಾಸ್ತವಿಕ ನಿಯಂತ್ರಣ ರೇಖೆ ಬಳಿ ನಿರ್ಮಾಣವಾಗಿರುವ ಉದ್ವಿಗ್ನತೆಯ ನಡುವೆ ಭಾರತೀಯ ಸೇನೆಯು ಚಳಿಗಾಲದ ಸಿದ್ಧತೆ ಆರಂಭಿಸಿದೆ. ಸೇನಾ ವಾಹನಗಳಿಗೆ ಇಂಧನ ಪೂರೈಸಲು ನೆರವಾಗುವಂತೆ ಹಾಗೂ ಮೈಕೊರೆಯುವ ಚಳಿಯಿಂದ ಇಂಧನವನ್ನು ಸುರಕ್ಷಿತವಾಗಿರಿಸಲು ಲಡಾಖ್ನಲ್ಲಿ ತೈಲ ಡಿಪೊಗಳನ್ನು ಭರ್ತಿ ಮಾಡಿಕೊಳ್ಳಲಾರಂಭಿಸಿದೆ.
‘ಮುಂಬರುವ ಚಳಿಗಾಲಕ್ಕಾಗಿ ಹಲವು ಡಿಪೊಗಳಲ್ಲಿ ತೈಲ ತುಂಬಿಸಿಕೊಳ್ಳಲಾಗಿದೆ. ಇಲ್ಲಿಂದಲೇ ಇಂಧನ ಸರಬರಾಜು ಮಾಡಲಿದ್ದೇವೆ’ ಎಂದು ಬ್ರಿಗೇಡಿಯರ್ ರಾಕೇಶ್ ಮನೋಚಾ ಹೇಳಿದ್ದಾರೆ.
ಏತನ್ಮಧ್ಯೆ ಮೇಜರ್ ಜನರಲ್ ಅರವಿಂದ್ ಕಪೂರ್ ಅವರು,ಭಾರತೀಯ ಸೇನೆಯು ಸಂಪೂರ್ಣ ಸಜ್ಜಾಗಿದೆ. ಪತ್ರಿ ಯೋಧನಿಗೂ ಅತ್ಯುತ್ತಮ ವಸ್ತ್ರ, ಶಿಬಿರ ಮತ್ತು ಆಹಾರವನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲ ಶ್ರೇಣಿಯ ಯೋಧರಿಗೂ ಒಂದೇ ಗುಣಮಟ್ಟದಪಡಿತರವನ್ನು ನೀಡಲಾಗುತ್ತಿದೆ. ಲಡಾಖ್ನಲ್ಲಿ ನಿಯೋಜಿಸಲಾಗಿರುವ ಪಡೆಯ ಅಗತ್ಯಕ್ಕಾಗಿ ಪಡಿತರ ಸಂಗ್ರಹಿಸಿಕೊಳ್ಳಲಾಗಿದೆ ಎಂದು ಬ್ರಿಗೇಡಿಯರ್ ಎ.ಎಸ್. ರಾಥೋಡ್ ತಿಳಿಸಿದ್ದಾರೆ.
ಉಭಯ ರಾಷ್ಟ್ರಗಳ ಸೇನಾ ಮುಖ್ಯಸ್ಥರುಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕವೂ ಗಡಿಯಲ್ಲಿ ಉದ್ವಿಗ್ನತೆ ಶಮನವಾಗಿಲ್ಲ. ಹೀಗಾಗಿ ಭಾರತೀಯ ಸೇನೆಯು ಎತ್ತರದ ಪರ್ವತ ಪ್ರದೇಶದಲ್ಲಿ ದೀರ್ಘಾವಧಿಯವರೆಗೆ ಯೋಧರನ್ನು ನಿಯೋಜಿಸಲು ಸಜ್ಜಾಗಿದೆ.