ನವದೆಹಲಿ: ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಮತ್ತು ಇಸ್ರೇಲ್ ರಾಯಭಾರ ಕಚೇರಿ ಸಮೀಪ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಅವರ ಪಶ್ಚಿಮ ಬಂಗಾಳ ಭೇಟಿ ಮುಂದೂಡಿಕೆಯಾಗಿದೆ.
ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ ಶನಿವಾರ ಮತ್ತು ಭಾನುವಾರ ಎರಡು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವುದು ನಿಗದಿಯಾಗಿತ್ತು. ಸದ್ಯ, ಭೇಟಿ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಇದಕ್ಕೆ ನಿಖರ ಕಾರಣವೇನು ಎಂಬುದನ್ನು ಅವು ಸ್ಪಷ್ಟಪಡಿಸಿಲ್ಲ.
ದೆಹಲಿಯ ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಶುಕ್ರವಾರ ಹಿಂಸಾಚಾರಕ್ಕೆ ತಿರುಗಿತ್ತು. ಸ್ಥಳೀಯರು ಎಂದು ಹೇಳಿಕೊಂಡ ದೊಡ್ಡ ಗುಂಪು ಕೈಯಲ್ಲಿ ದೊಣ್ಣೆ ಮತ್ತಿತರ ಆಯುಧಗಳನ್ನು ಹಿಡಿದು ಪ್ರತಿಭಟನಕಾರರನ್ನು ತೆರವು ಮಾಡುವುದಕ್ಕಾಗಿ ಪ್ರತಿಭಟನಾ ಸ್ಥಳಕ್ಕೆ ನುಗ್ಗಿದಾಗ ಗಲಭೆ ಉಂಟಾಗಿತ್ತು. ಮತ್ತೊಂದೆಡೆ, ಇಸ್ರೇಲ್ ರಾಯಭಾರ ಕಚೇರಿ ಸಮೀಪ ಸ್ಫೋಟ ಸಂಭವಿಸಿತ್ತು.
ಏಪ್ರಿಲ್–ಮೇನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳಕ್ಕೆ ಶಾ ಅವರು ಈಗಾಗಲೇ ಹಲವು ಬಾರಿ ಭೇಟಿ ನೀಡಿದ್ದು, ಬಿಜೆಪಿಯ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.