ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಉದ್ವಿಗ್ವ ಸ್ಥಿತಿ ಶಮನ ಯತ್ನ: ಭಾರತ-ಚೀನಾ ನಡುವೆ 6ನೇ ಸುತ್ತಿನ ಚರ್ಚೆ

Last Updated 21 ಸೆಪ್ಟೆಂಬರ್ 2020, 9:22 IST
ಅಕ್ಷರ ಗಾತ್ರ

ನವದೆಹಲಿ: ಪೂರ್ವ ಲಡಾಕ್ ನಲ್ಲಿ ಮೂಡಿರುವ ಉದ್ವಿಗ್ನ ಸ್ಥಿತಿಯನ್ನು ಶಮನಗೊಳಿಸುವ ಕ್ರಮವಾಗಿ ಸೇನೆಯನ್ನು ಹಿಂಪಡೆಯುವ ಸಂಬಂಧ ಆಗಿರುವ ಐದು ಅಂಶಗಳ ಒಪ್ಪಂದದ ಅನುಷ್ಠಾನ ಕುರಿತಂತೆ ಸೋಮವಾರ ಭಾರತ ಮತ್ತು ಚೀನಾದ ಸೇನೆಗಳ ಹಿರಿಯ ಕಮಾಂಡರ್ ಗಳ ನಡುವೆ ಆರನೇ ಸುತ್ತಿನ ಮಾತುಕತೆ ನಡೆಯಿತು.

ಮಾತುಕತೆಯು ಲಡಾಖ್ ನಲ್ಲಿ ವಾಸ್ತವ ಗಡಿರೇಖೆಗೆ ಹೊಂದಿಕೊಂಡಂತೆ ಇರುವ ಚೀನಾ ಭಾಗದ ಮೊಲ್ಡೊದಲ್ಲಿ ನಡೆಯಿತು. ಭಾರತ ನಿಯೋಗದ ನೇತೃತ್ವವನ್ನು ಲೆಫ್ಟಿನಂಟ್ ಜನರಲ್ ಹರಿಂದರ್ ಸಿಂಗ್ ವಹಿಸಿದ್ದರು.ಚೀನಾದ ನಿಯೋಗದ ನೇತೃತ್ವವನ್ನು ದಕ್ಷಿಣ ಕ್ಸಿಜಿಯಾಂಗ್ ಮಿಲಿಟರಿ ವಲಯದ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ವಹಿಸಿದ್ದರು.

ಭಾರತದ ನಿಯೋಗದಲ್ಲಿ ವಿದೇಶಾಂಗ ಸಚಿವಾಲಯದ ಉನ್ನತ ಅಧಿಕಾರಿಗಳು, ಲೆಫ್ಟಿನಂಟ್ ಜನರಲ್ ಪಿಜಿಕೆ ಮೆನನ್ ಅವರೂ ಇದ್ದರು. ಉಭಯ ರಾಷ್ಟ್ರಗಳ ನಡುವಣ ಉನ್ನತ ಮಟ್ಟದ ಸೇನಾ ಹಂತದ ಚರ್ಚೆಯಲ್ಲಿ ಇದೇ ಮೊದಲ ಬಾರಿಗೆ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸೋಮವಾರ ಚರ್ಚೆಯ ಕಾರ್ಯಸೂಚಿಯಲ್ಲಿ ಉಭಯ ರಾಷ್ಟ್ರಗಳ ನಡುವೆ ಸೆಪ್ಟೆಂಬರ್ 10ರಂದು ಮಾಸ್ಕೊದಲ್ಲಿ ಆಗಿದ್ದ ಒಪ್ಪಂದದ ಜಾರಿಗೆ ನಿರ್ದಿಷ್ಟ ಕಾಲಮಿತಿ ನಿಗದಿಪಡಿಸುವುದೇ ಪ್ರಧಾನವಾಗಿತ್ತು. ಉಭಯ ರಾಷ್ಟ್ರಗಳ ನಡುವೆ ಗಡಿಯಲ್ಲಿ ಮೂಡಿರುವ ಉದ್ವಿಗ್ನ ಸ್ಥಿತಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಒಡಂಬಡಿಕೆಗೆ ಬರಲಾಗಿದೆ.

ಈ ನಡುವೆ, ಸೇನೆಗೆ ಹೊಸದಾಗಿ ಸೇರ್ಪಡೆಯಾಗಿರುವ ರಫೇಲ್ ಜೆಟ್ ಗಳು ಪೂರ್ವ ಲಡಾಖ್ ಗೆ ಶಸ್ತ್ರಾಸ್ತ್ರಗಳನ್ನು ಒಯ್ಯುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಇದು ಚೀನಾದ ಪ್ರಚೋದನೆ ಕ್ರಮಗಳ ಹಿನ್ನೆಲೆಯಲ್ಲಿ ಪ್ರತಿರೋಧಕ್ಕೆ ಸನ್ನದ್ಧವಾಗಿದ್ದೇವೆ ಎಂಬ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದು ಇದರ ಉದ್ದೇಶ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT