ನವದೆಹಲಿ: ಗಡಿ ಭದ್ರತಾ ಪಡೆಗೆ (ಬಿಎಸ್ಎಫ್) ಕಾರ್ಯಾಚರಣೆಯ ವ್ಯಾಪ್ತಿ ವಿಸ್ತರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಪಂಜಾಬ್ ರಾಜ್ಯಪಾಲರ ನಿವಾಸದತ್ತ ಪ್ರತಿಭಟನೆ ನಡೆಸಲು ಯತ್ನಿಸಿದ ಶಿರೋಮಣಿ ಅಕಾಲಿ ದಳದ (ಎಸ್ಎಡಿ) ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ಕೆಲವು ಹೊತ್ತು ಬಂಧನದಲ್ಲಿರಿಸಿ ಬಿಡುಗಡೆಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಭವನದ ಹೊರಗಡೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಾದಲ್ ಹಾಗೂ ಪಕ್ಷದ ಬೆಂಬಲಿಗರ ವಿರುದ್ಧ ಬಲ ಪ್ರಯೋಗ ನಡೆದಿದೆ ಎಂದು ಎಸ್ಎಡಿ ಆರೋಪಿಸಿದೆ.
ಪಂಜಾಬ್, ಪಶ್ಚಿಮ ಬಂಗಾಳ, ಅಸ್ಸಾಂನ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ 15 ಕಿ.ಮೀ. ಬದಲಿಗೆ 50 ಕಿ.ಮೀ. ಪ್ರದೇಶದ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆ, ಜಪ್ತಿ, ಬಂಧನಕ್ಕೆ ಅವಕಾಶ ಕಲ್ಪಿಸಿ ಕೇಂದ್ರ ಸರ್ಕಾರ ಬಿಎಸ್ಎಫ್ ಕಾಯ್ದೆಗೆ ತಿದ್ದುಪಡಿ ತಂದಿದೆ. ಪಂಜಾಬ್ ಪಾಕಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಾದಲ್, 'ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿಯಾಗಿ ಕೇಂದ್ರ ಸರ್ಕಾರವು ಒಕ್ಕೂಟ ರಚನೆಯ ಮೇಲೆ ನಡೆಸಿರುವ ದಾಳಿಯ ಬಗ್ಗೆ ವಿವರಣೆ ನೀಡಲು ಬಯಸಿದ್ದೆ' ಎಂದು ಹೇಳಿದ್ದಾರೆ.
'ಈ ಆದೇಶದ ಮೂಲಕ ಅಮೃತಸರ ನಗರ, ಟಾರ್ನ್ ತರನ್, ಫಿರೋಜ್ಪುರ, ಫಿಜಿಲ್ಕ ಸೇರಿದಂತೆ ಪಂಜಾಬ್ನ ಅರ್ಧದಷ್ಟು ಭಾಗವು ಬಿಎಸ್ಎಫ್ ವ್ಯಾಪ್ತಿಗೆ ಬರುತ್ತದೆ. ಅಂತಿಮವಾಗಿ ಕಾನೂನು ಮತ್ತು ಸುವ್ಯವಸ್ಥೆಯು ಕೇಂದ್ರದ ನಿಯಂತ್ರಣಕ್ಕೆ ಬರುತ್ತದೆ' ಎಂದು ಹೇಳಿದ್ದಾರೆ.
'ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಮೌನವಾಗಿ ಕುಳಿತಿದ್ದಾರೆ. ಆದರೆ ಅಕಾಲಿದಳವು ದೇಶದ ಒಕ್ಕೂಟ ರಚನೆಯು ಅಸ್ಥಿತ್ವದಲ್ಲಿದೆ ಎಂಬುದನ್ನು ಖಾತ್ರಿಪಡಿಸಲು ಹೋರಾಟವನ್ನು ಮುಂದುವರಿಸುತ್ತದೆ' ಎಂದಿದ್ದಾರೆ.
'ಮೊದಲು ಕೇಂದ್ರ ಸರ್ಕಾರವು ರಾಜ್ಯದ ಪರಿಧಿಯಲ್ಲಿದ್ದ ಕೃಷಿ ಕಾನೂನುಗಳನ್ನು ರಚಿಸಿತು. ಈಗ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸಲು ಬಯಸುತ್ತಿದೆ' ಎಂದು ಆರೋಪಿಸಿದ್ದಾರೆ.
ಏತನ್ಮಧ್ಯೆ ಹೇಳಿಕೆ ಕೊಟ್ಟಿರುವ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ, ಇದು ದೇಶದ ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ ಎಂದು ಆರೋಪಿಸಿದ್ದಾರೆ.
ಗಡಿ ಭದ್ರತಾ ಪಡೆಗೆ ಕಾರ್ಯಾಚರಣೆಯ ವ್ಯಾಪ್ತಿ ವಿಸ್ತರಿಸುವ ಕೇಂದ್ರ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್, ಇದು ಸಂವಿಧಾನದ ವಿರುದ್ಧದ ಸಂಘಟಿತ ದಾಳಿಯಾಗಿದ್ದು, ದೇಶದ ಒಕ್ಕೂಟ ರಚನೆಯನ್ನು ದುರ್ಬಲಗೊಳಿಸಿ ಹತ್ತಿಕ್ಕುವ ಹುನ್ನಾರವಾಗಿದೆ ಎಂದು ಆರೋಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.