ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇದು ಕೋವಿಡ್ 19 ಅಂತ್ಯದ ಆರಂಭ’: ಲಸಿಕೆ ವಿತರಣೆಗೆ ಚಾಲನೆ ನೀಡಿ ಮೋದಿ ಹೇಳಿಕೆ

ವದಂತಿಗೆ ಕಿವಿಗೊಡಬೇಡಿ: ಪ್ರಧಾನಿ ಮನವಿ
Last Updated 16 ಜನವರಿ 2021, 19:11 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತಿ ದೊಡ್ಡ ಕೋವಿಡ್ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ‘ಇದು ಕೋವಿಡ್ 19 ಅಂತ್ಯದ ಆರಂಭ’ಎಂದು ಬಣ್ಣಿಸಿದ್ದಾರೆ.

ಎಲ್ಲರೂ ಲಸಿಕೆ ಯಾವಾಗ ಸಿಗುತ್ತದೆ ಎಂದು ಕೇಳುತ್ತಿದ್ದರು. ಅದು ಈಗ ಲಭ್ಯವಾಗಿದೆ. ಈ ಸಂದರ್ಭದಲ್ಲಿ ನಾನು ದೇಶದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಸಾಮಾನ್ಯವಾಗಿ ಲಸಿಕೆ ಅಭಿವೃದ್ಧಿಗೆ ವರ್ಷಗಳೇ ಬೇಕಾಗುತ್ತವೆ. ಆದರೆ, ಒಂದೇ ವರ್ಷದ ಅವಧಿಯಲ್ಲಿ ಒಂದಲ್ಲ, ಎರಡು 'ಮೇಡ್‌ ಇನ್‌ ಇಂಡಿಯಾ' ಲಸಿಕೆಗಳು ತಯಾರಾಗಿವೆ. ಈ ಮಧ್ಯೆ ಇತರ ಲಸಿಕೆಗಳ ಅಭಿವೃದ್ಧಿ ಕಾರ್ಯವೂ ವೇಗವಾಗಿ ನಡೆಯುತ್ತಿದೆ ಎಂದು ಹೇಳುವ ಮೂಲಕ ವಿಜ್ಞಾನಿಗಳನ್ನು ಪ್ರಶಂಸಿಸಿದ್ದಾರೆ.

ಕೋವಿಡ್‌ ಲಸಿಕೆಯ ಎರಡು ಡೋಸ್‌ಗಳು ಅತ್ಯಗತ್ಯ. ಎರಡು ಬಾರಿಯ ಲಸಿಕೆಗೆ ಒಂದು ತಿಂಗಳ ಅಂತರ ಇರಬೇಕು ಎಂದು ತಜ್ಞರು ಹೇಳಿದ್ದಾರೆ.

ಮೊದಲ ಲಸಿಕೆ ನಂತರ ಮಾಸ್ಕ್‌ ಧರಿಸುವಿಕೆ ಮತ್ತು ಅಂತರ ಕಾಪಾಡಿಕೊಳ್ಳುವ ವಿಚಾರದಲ್ಲಿ ಯಾರೂ ಎಚ್ಚರ ತಪ್ಪಬಾರದು. ಯಾಕೆಂದರೆ, ನಮ್ಮಲ್ಲಿನ ರೋಗ ನಿರೋಧಕ ಶಕ್ತಿ ಬೆಳವಣಿಗೆಯಾಗುವುದೇ ಎರಡನೇ ಡೋಸ್‌ನ ನಂತರ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ.

ಭಾರತದಲ್ಲಿ ನಡೆಯುತ್ತಿರುವ ಇಂಥ ಲಸಿಕೆ ಅಭಿಯಾನ ಇತಿಹಾಸದಲ್ಲೇ ಎಂದೂ, ಎಲ್ಲಿಯೂ ನಡೆದಿಲ್ಲ. 100 ದೇಶಗಳು 3 ಕೋಟಿ ಜನಸಂಖ್ಯೆ ಹೊಂದಿವೆ. ಆದರೆ, ಭಾರತವೊಂದೇ 3 ಕೋಟಿ ಜನರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡುತ್ತಿದೆ. ಎರಡನೇ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲಿದ್ದೇವೆ.

ಈ ಒಂದು ವರ್ಷವನ್ನು ಅವಲೋಕಿಸಿದಾಗ ನಾವು ವ್ಯಕ್ತಿಯಾಗಿ, ಕುಟುಂಬವಾಗಿ, ರಾಷ್ಟ್ರವಾಗಿ ಮಹತ್ತರವಾದುದ್ದನ್ನು ಕಲಿತಿದ್ದೇವೆ. ಕೋವಿಡ್‌ ಜನರನ್ನು ಅವರ ಕುಟುಂಬದಿಂದ ದೂರವಿಟ್ಟಿತು. ಅಸ್ಪತ್ರೆಗೆ ದಾಖಲಾದ ತಮಗಿಂತ ಕಿರಿಯರನ್ನು ಭೇಟಿ ಮಾಡಲು ಹಲವರಿಗೆ ಸಾಧ್ಯವೇ ಆಗಲಿಲ್ಲ. ಮಾರಕ ಕಾಯಿಲೆಯಿಂದ ಸತ್ತವರ ಅಂತ್ಯ ಸಂಸ್ಕಾರವನ್ನುಸೂಕ್ತ ರೀತಿಯಲ್ಲಿ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಕೋವಿಡ್‌ ವಿರುದ್ಧದ ಹೋರಾಟದ ಹಲವು ವಿಚಾರಗಳಲ್ಲಿ ಜಗತ್ತಿಗೆ ನಾವು ಮಾದರಿಯಾಗಿದ್ದೇವೆ. ಕೋವಿಡ್‌ ಬರುತ್ತಲೇ ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಸಿಲುಕಿದ್ದ ನಮ್ಮವರನ್ನು ನಾವು ರಕ್ಷಿಸಿ ಕರೆತಂದೆವು. ಅಷ್ಟೇ ಅಲ್ಲ, ಇತರ ದೇಶಗಳ ನಾಗರಿಕರನ್ನೂ ರಕ್ಷಿಸುವ ಕಾರ್ಯ ಕೈಗೊಂಡೆವು ಎಂದು ಹೇಳಿದ್ದಾರೆ.

ಲಸಿಕೆ ಅಭಿಯಾನ ಆರಂಭವಾಗಿದೆ ಎಂದು ಜನರು ಮಾಸ್ಕ್‌ ಧರಿಸುವುದರಿಂದ, ಅಂತರ ಕಾದುಕೊಳ್ಳುವುದರಿಂದ ವಿಮುಖವಾಗಬಾರದು. ಕೋವಿಡ್‌ ನಿಯಮಾವಳಿಗಳನ್ನು ಪಾಲನೆ ಮಾಡುವುದನ್ನು ನಿಲ್ಲಿಸಬಾರದು. ನಾವು ಇನ್ನೊಂದು ಪ್ರತಿಜ್ಞೆ ತೆಗೆದುಕೊಳ್ಳಬೇಕು. ಅದೇನೆಂದರೆ, ಲಸಿಕೆಯನ್ನೂ ಪಡೆಯುತ್ತೇವೆ, ಎಚ್ಚರಿಕೆಯನ್ನು ವಹಿಸುತ್ತೇವೆ ಎಂಬುದು ಎಂದು ಮೊದಿ ಒತ್ತಿ ಹೇಳಿದ್ದಾರೆ

ಕಷ್ಟಗಳ ಹೊರತಾಗಿಯೂ, ವಿಶ್ವದ 150 ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ನೆರವನ್ನು ಭಾರತ ನೀಡಿದೆ. ಪ್ಯಾರಸಿಟಮಾಲ್ ಆಗಿರಲಿ, ಹೈಡ್ರಾಕ್ಸಿಕ್ಲೋರೋಕ್ವಿನ್ ಅಥವಾ ಪರೀಕ್ಷಾ ಸಾಧನವಾಗಲಿ. ಇತರ ದೇಶಗಳ ಜನರನ್ನು ಉಳಿಸಲು ಭಾರತವು ಎಲ್ಲ ಪ್ರಯತ್ನಗಳನ್ನು ಮಾಡಿದೆ ಎಂದು ಹೇಳಿದ್ದಾರೆ.

ನಾವು ನಮ್ಮದೇ ಲಸಿಕೆಯನ್ನು ಅಭಿವೃದ್ಧಿಪಡಿಸಿರುವ ಹೊತ್ತಿನಲ್ಲಿ ಇಂದು ಜಗತ್ತು ಭಾರತವನ್ನು ಭರವಸೆಯಿಂದ ನೋಡುತ್ತಿದೆ. ನಮ್ಮ ಲಸಿಕೆ ಅಭಿಯಾನ ಆರಂಭವಾಗುತ್ತಲೇ, ವಿಶ್ವದ ಇತರ ದೇಶಗಳು ಇದರ ಲಾಭ ಪಡೆಯುತ್ತಿವೆ. ಭಾರತದ ಲಸಿಕೆ ಮತ್ತು ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಜನರ ಹಿತಾಸಕ್ತಿಗಾಗಿ ಬಳಸಬೇಕು, ಇದು ನಮ್ಮ ಬದ್ಧತೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ.

‘ವದಂತಿಗೆ ಕಿವಿಗೊಡಬೇಡಿ’

ಭಾರತದಲ್ಲಿ ತಯಾರಾಗಿರುವ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದು ವಿಜ್ಞಾನಿಗಳಿಗೆ ಮನವರಿಕೆ ಆದ ಬಳಿಕವೇ ಅವುಗಳ ತುರ್ತು ಬಳಕೆಗೆ ಅವಕಾಶ ನೀಡಲಾಗಿದೆ. ಈ ಲಸಿಕೆಗಳಿಗೆ ಸಂಬಂಧಿಸಿ ಅಪಪ್ರಚಾರ ಮತ್ತು ವದಂತಿಗಳಿಗೆ ಜನರು ಕಿವಿಗೊಡಬಾರದು ಎಂದು ಮೋದಿ ಹೇಳಿದ್ದಾರೆ.

ಈ ಅಭಿಯಾನದ ಮೂಲಕ ಕೊರೊನಾ ವಿರುದ್ಧದ ಯುದ್ಧದಲ್ಲಿ ದೇಶಕ್ಕೆ ‘ನಿರ್ಣಾಯಕ ಗೆಲುವು’ ಲಭಿಸಲಿದೆ. ಲಸಿಕೆ ಪಡೆದುಕೊಂಡ ಬಳಿಕವೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

ಲಸಿಕೆಯ ಎರಡು ಡೋಸ್‌ ಪಡೆದುಕೊಳ್ಳುವುದು ಬಹಳ ಮುಖ್ಯ. ಒಂದು ಡೋಸ್‌ ಪಡೆದು ಎರಡನೆಯ ಡೋಸ್ ಪಡೆಯಲು ಮರೆಯಬೇಡಿ ಎಂದರು.

ಭಾವುಕರಾದ ಮೋದಿ

ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಜನರು ಅನುಭವಿಸಿದ ಕಷ್ಟಗಳನ್ನು ನೆನಪಿಸಿಕೊಂಡು ಮೋದಿ ಭಾವುಕರಾದರು. ಸೋಂಕಿತರ ಸೇವೆ ಮಾಡುತ್ತಲೇ ಹಲವು ಆರೋಗ್ಯ ಕಾರ್ಯಕರ್ತರು ಮೃತಪಟ್ಟಿದ್ದಾರೆ. ಮೃತಪಟ್ಟ ಹಲವರಿಗೆ ಸಂ‍ಪ್ರದಾಯದ ರೀತಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲೂ ಸಾಧ್ಯವಾಗಿಲ್ಲ ಎಂದು ಅವರು ಬೇಸರಪಟ್ಟರು.

ವ್ಯಕ್ತಿಗೆ ಕಾಯಿಲೆ ಬಂದರೆ ಇಡೀ ಕುಟುಂಬ ಅವರ ಆರೈಕೆಗೆ ನಿಲ್ಲುತ್ತದೆ. ಆದರೆ, ಕೊರೊನಾ ಸೋಂಕಿತರು ಪ್ರತ್ಯೇಕಗೊಂಡರು, ತಮ್ಮವರೆಲ್ಲರಿಂದ ದೂರವಾಗಿ ಏಕಾಂಗಿಯಾಗಿ ನೋವು ಅನುಭವಿಸಿದರು ಎಂದು ಅವರು ಹೇಳಿದರು.‘ರೋಗಪೀಡಿತರಾದ ಹಲವು ಸಣ್ಣ ಮಕ್ಕಳು ತಮ್ಮ ತಾಯಂದಿರಿಂದಲೂ ದೂರ ಇರಬೇಕಾಯಿತು, ನಾವು ಏನೂ ಮಾಡುವಂತಿರಲಿಲ್ಲ. ಹಿರಿಯ ನಾಗರಿಕರು ಕೂಡ ಆಸ್ಪತ್ರೆಯ ಏಕಾಂತದಲ್ಲಿ ಕಳೆಯಬೇಕಾಯಿತು. ಮಕ್ಕಳು ಕೂಡ ಅವರ ಜತೆಗೆ ಇರಲಿಲ್ಲ’ ಎಂದು ಮೋದಿ ಹೇಳಿದರು.

ನೈರ್ಮಲ್ಯ ಕಾರ್ಮಿಕನಿಗೆ ಮೊದಲ ಲಸಿಕೆ

ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್‌) ನೈರ್ಮಲ್ಯ ಕೆಲಸಗಾರ ಮನೀಶ್‌ ಕುಮಾರ್‌ ಅವರು ದೆಹಲಿಯಲ್ಲಿ ಶನಿವಾರ ಬೆಳಿಗ್ಗೆ ಮೊದಲ ಲಸಿಕೆ ಪಡೆದರು. ಬಳಿಕ, ಏಮ್ಸ್‌ ನಿರ್ದೇಶಕ ರಣದೀಪ್‌ ಗುಲೇರಿಯಾ, ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್‌ ಲಸಿಕೆ ಹಾಕಿಸಿಕೊಂಡರು. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಉಪಸ್ಥಿತರಿದ್ದರು. ಕೋವಿಶೀಲ್ಡ್‌ ಲಸಿಕೆ ತಯಾರಿಸುತ್ತಿರುವ ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್ ಪೂನಾವಾಲಾ ಕೂಡ ಲಸಿಕೆ ಹಾಕಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT