ಧುಬ್ರಿ, ಅಸ್ಸಾಂ: ಅಸ್ಸಾಂನ ಧುಬ್ರಿ ಜಿಲ್ಲೆಯ ಬಳಿ ಬ್ರಹ್ಮಪುತ್ರ ನದಿಯಲ್ಲಿ ನಾಲ್ಕು ದಿನದ ಹಿಂದೆ ದೋಣಿ ಮುಳುಗಿ ನಾಪತ್ತೆಯಾಗಿದ್ದ ಅಧಿಕಾರಿಯ ಶವ ಭಾನುವಾರ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಸ್ಎಫ್, ಎನ್ಡಿಆರ್ಎಫ್, ಎಸ್ಡಿಆರ್ಎಫ್ ಸಿಬ್ಬಂದಿ, ದೋಣಿ ಮುಳುಗಿದ್ದ ಐರೊಂಜೊಂಗ್ಲಾ ಪ್ರದೇಶದಿಂದ 700 ಮೀಟರ್ ದೂರದಲ್ಲಿ, ಬಾಂಗ್ಲಾದೇಶ ಗಡಿಯ ಬಳಿ, ಸರ್ಕಲ್ ಇನ್ಸ್ಪೆಕ್ಟರ್ ಸಂಜು ದಾಸ್ ಅವರ ಮೃತದೇಹವನ್ನು ಪತ್ತೆ ಮಾಡಿದೆ ಎಂದೂ ಅವರು ಹೇಳಿದರು.
ಸಂಜು ದಾಸ್ ಸಿಲ್ಚಾರ್ ಮೂಲದವರು.
29 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ದೋಣಿಯು, ಧುಬ್ರಿಯಿಂದ 3 ಕಿ.ಮೀ. ದೂರದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದಕ್ಕೆ ಡಿಕ್ಕಿ ಹೊಡೆದುಬ್ರಹ್ಮಪುತ್ರ ನದಿಯಲ್ಲಿ ಮುಳುಗಿತ್ತು. ನದಿಯಲ್ಲಿ ಮುಳುಗಿದ್ದ ಜನರನ್ನು ಎಸ್ಡಿಆರ್ಎಫ್ ಪಡೆಯ ಕಾರ್ಯಾಚರಣೆಯ ಮೂಲಕ 28 ಮಂದಿಯನ್ನು ರಕ್ಷಿಸಲಾಗಿತ್ತು.
ಇದೇ ವೇಳೆ, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ, ಖಾಸಗಿ ಬಹುರಾಷ್ಟ್ರೀಯ ಕಟ್ಟಡ ನಿರ್ಮಾಣ ಸಂಸ್ಥೆಯ ಇಬ್ಬರು ಉದ್ಯೋಗಿಗಳನ್ನು ಬಂಧಿಸಲಾಗಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಆಧಾರದ ಮೇಲೆ ದೂರು ನೀಡಿದ ಬಳಿಕ ಈ ಇಬ್ಬರು ಉದ್ಯೋಗಿಗಳನ್ನು ಬಂಧಿಸಲಾಗಿದೆ.