ಬೆಂಗಳೂರು: ಸೂರ್ಯನಗರ 4 ನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಪ್ರಧಾನ ಮಂತ್ರಿಗಳ ವಸತಿ ನಿರ್ಮಾಣ ಕಾರ್ಯಕ್ಕೆ ಸಚಿವ ಸಂಪುಟ ಸಭೆ ಹಸಿರು ನಿಶಾನೆ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಸತಿ ಸಚಿವ ವಿ.ಸೋಮಣ್ಣ, ‘ಭೂಮಾಲೀಕರ ಸರಣಿ ಸಭೆ ನಡೆಸಿ 50:50 ಅನುಪಾತದಲ್ಲಿ ಭೂಮಿ ಪಡೆಯಲು ಭೂಮಾಲೀಕರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ಕಳೆದ 7 ವರ್ಷಗಳಿಂದ ಇದಕ್ಕೆ ಪರಿಹಾರ ದೊರಕದೇ ಅತ್ತ ಭೂಮಿಯೂ ಇಲ್ಲದೆ ಅತಂತ್ರರಾಗಿದ್ದ ಭೂಮಾಲೀಕರ ಸಂಕಷ್ಟಕ್ಕೆ ಸರ್ಕಾರ ಕೊನೆಗೂ ಸ್ಪಂದಿಸಿದೆ’ ಎಂದು ಹೇಳಿದ್ದಾರೆ.
‘ಭೂಮಾಲೀಕರ ಬೇಡಿಕೆಯಂತೆ ₹20 ಲಕ್ಷ ಮುಂಗಡವಾಗಿ ನೀಡಲು ಸಂಪುಟ ಅನುಮೋದನೆ ನೀಡಿದೆ. ಪಾಲುದಾರಿಕೆಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ₹1,910 ಕೋಟಿಯಲ್ಲಿ ಪೂರ್ಣಗೊಳ್ಳುತ್ತಿದೆ. ಇಲ್ಲವಾದರೆ ₹4,200 ಕೋಟಿ ಬೇಕಾಗುತ್ತಿತ್ತು’ ಎಂದು ಸೋಮಣ್ಣ ತಿಳಿಸಿದ್ದಾರೆ.
ಇಲವಾಲದಲ್ಲೂ ಪರಿಹಾರ: ಮೈಸೂರು ತಾಲ್ಲೂಕು ಇಲವಾಲ ಹೋಬಳಿಯಲ್ಲಿ 469 ಎಕರೆ ಪ್ರದೇಶದಲ್ಲಿ ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಪಡಿಸಿರುವ ಕೆಆರ್ಎಸ್ ನಿಸರ್ಗ ವಸತಿ ಯೋಜನೆಯಲ್ಲಿ ಭೂಮಾಲೀಕರಿಗೆ ಸಾಂತ್ವನ ನಿವೇಶನ ನೀಡಲೂ ಸಂಪುಟ ಒಪ್ಪಿಗೆ ನೀಡಿದೆ. ಇದರ ಅನ್ವಯ ಅರ್ಧ ಎಕರೆ ಭೂಮಿ ಕಳೆದುಕೊಂಡವರಿಗೆ 6x9 ಮೀಟರ್ ಅಳತೆಯ ಒಂದು ನಿವೇಶನ, ಒಂದು ಎಕರೆ ಕಳೆದುಕೊಂಡವರಿಗೆ 9x12 ಮೀಟರ್ ಅಳತೆಯ ಒಂದು ನಿವೇಶನ ನೀಡಲಾಗುವುದು ಎಂದು ಸೋಮಣ್ಣ ತಿಳಿಸಿದ್ದಾರೆ.