ಚಂಡೀಗಡ: ಅಡ್ವೊಕೇಟ್ ಜನರಲ್ ಅವರನ್ನು ಪದಚ್ಯುತಗೊಳಿಸಿದ್ದಕ್ಕಾಗಿ ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರು ಬುಧವಾರ ತಮ್ಮದೇ ಪಕ್ಷದ ನಾಯಕರಿಂದ ತೀವ್ರ ವಾಗ್ದಾಳಿ ಎದುರಿಸಬೇಕಾಯಿತು.
ಕಾಂಗ್ರೆಸ್ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸುನೀಲ್ ಜಾಖರ್ ಅವರು, ಚನ್ನಿ ಅವರನ್ನು ‘ನಿಜವಾಗಿಯೂ ರಾಜಿ ಮಾಡಿಕೊಂಡ ಸಿಎಂ’ ಎಂದು ಟೀಕಿಸಿದರು.
ಆನಂದ್ಪುರ ಸಾಹಿಬ್ನ ಸಂಸದರಾದ ಹಿರಿಯ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಅವರು, ಈ ವಿಷಯದ ಬಗ್ಗೆ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಎ.ಜಿ ಕಚೇರಿಯನ್ನು ರಾಜಕೀಯಗೊಳಿಸುವುದು ಸಾಂವಿಧಾನಿಕ ಹುದ್ದೆಗಳ ಸಮಗ್ರತೆಯನ್ನು ಹಾಳುಮಾಡಿದಂತಾಗುತ್ತದೆ ಎಂದು ಟೀಕಿಸಿದರು.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ರಾಜ್ಯದ ಎ.ಜಿಯನ್ನು ಬದಲಿಸುವಂತೆ ಮಾಡಿದ ಒತ್ತಡಕ್ಕೆ ಮಣಿದು ಅಡ್ವೊಕೇಟ್ ಜನರಲ್ ಎಪಿಎಸ್ ಡಿಯೋಲ್ ಅವರ ರಾಜೀನಾಮೆಯನ್ನು ಚನ್ನಿ ಸರ್ಕಾರ ಮಂಗಳವಾರ ಅಂಗೀಕರಿಸಿದ ನಂತರ ಈ ಹೇಳಿಕೆಗಳು ಬಂದಿವೆ.
ಹೊಸ ಅಡ್ವೊಕೇಟ್ ಜನರಲ್ ನೇಮಕ ಮಾಡಲಾಗುವುದು ಎಂದು ಚನ್ನಿ ಹೇಳಿದ್ದರು.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಜಾಖರ್ ಅವರು, ‘ಸಮರ್ಥ ಆದರೆ ‘ಆಪಾದಿತ’ ಅಧಿಕಾರಿಯ ಉಚ್ಚಾಟನೆಯು ‘ನಿಜವಾಗಿ’ ರಾಜಿ ಮಾಡಿಕೊಂಡ ಸಿಎಂ ಅನ್ನು ಅನಾವರಣಗೊಳಿಸಿದೆ’ ಎಂದು ಟ್ವೀಟ್ ಮಾಡಿದ್ದಾರೆ.