ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಆರು ತಿಂಗಳು ಇರುವಂತೆಯೇ, ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಮಾಜಿ ಮುಖ್ಯಮಂತ್ರಿ ಕಮಲಾಪತಿ ತ್ರಿಪಾಠಿ ಅವರ ಮೊಮ್ಮಗ ಲಲಿತೇಶ್ಪತಿ ತ್ರಿಪಾಠಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಹಿರಿಯರು, ನಿಷ್ಠರಾದ ಕಾರ್ಯಕರ್ತರಿಗೆ ಪಕ್ಷದಲ್ಲಿ ಅವಮಾನ ಆಗುತ್ತಿದೆ ಎಂದು ರಾಜೀನಾಮೆಗೆ ಕಾರಣ ನೀಡಿದ್ದಾರೆ. ಮಾಜಿ ಶಾಸಕರೂ ಆದ ಅವರು, ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದರು.
ಪಕ್ಷಕ್ಕೆ ಹಲವು ಪೀಳಿಗೆಗಳಿಂದ ನಿಷ್ಠರಾಗಿರುವ ಕಾರ್ಯಕರ್ತರ ಹಿತಾಸಕ್ತಿ ರಕ್ಷಿಸಲು ನಾನು ವಿಫಲವಾಗಿದ್ದೇನೆ ಎಂದು ಹೇಳಿದ್ದಾರೆ. ಪಕ್ಷದ ಮೂಲಗಳ ಪ್ರಕಾರ, ಉತ್ತರಪ್ರದೇಶದ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಲಾಲು ಅವರ ಕಾರ್ಯವೈಖರಿಗೆ ಕುರಿತು ಅಸಮಾಧಾನ ಇತ್ತು. ಉಪಾಧ್ಯಕ್ಷರಾಗಿದ್ದರೂ ಕಡೆಗಣಿಸಲಾಗುತ್ತಿದೆ ಎಂಬ ಬೇಸರವಿತ್ತು.
ಮುಂದಿನ ಹೆಜ್ಜೆ ಕುರಿತು ಇನ್ನೂ ತೀರ್ಮಾನಿಸಿಲ್ಲ. ಬೆಂಬಲಿಗರ ಜೊತೆಗೆ ಚರ್ಚಿಸಿ ನಿರ್ಧರಿಸುತ್ತೇನೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.