ನವದೆಹಲಿ: ಬಿಜೆಪಿಯ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಜತೆಗೆ ಸಹಮತ ಮುಂದುವರಿಸಲು ಸಿಪಿಎಂನಲ್ಲಿ ಒಮ್ಮತಮೂಡಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಗೊತ್ತುವಳಿಯ ರೂಪುರೇಷೆಯೊಂದನ್ನು ಭಾನುವಾರ ಮುಕ್ತಾಯವಾದ 3 ದಿನಗಳ ಸಿಪಿಎಂ ಕೇಂದ್ರ ಸಮಿತಿ ಸಭೆಯಲ್ಲಿ ಅಂಗೀಕರಿಸಲಾಯಿತು.
ಈ ರೂಪುರೇಷೆಯ ಆಧಾರದಲ್ಲಿ, ಪಾಲಿಟ್ ಬ್ಯೂರೊವು ಗೊತ್ತುವಳಿಯ ಪಠ್ಯ ಸಿದ್ಧಪಡಿಸಲಿದೆ. ಜನವರಿಯಲ್ಲಿ ನಡೆಯುವ ಸಮಿತಿ ಸಭೆಯಲ್ಲಿ ಈ ಗೊತ್ತುವಳಿಯನ್ನು ಮಂಡಿಸಲಾಗುವುದು. ಏಪ್ರಿಲ್ನಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆಯಲಿರುವ ಪಕ್ಷದ ಸಭೆಯಲ್ಲಿ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.
ಕಾಂಗ್ರೆಸ್ ಜೊತೆ ಸಹಯೋಗ ಮುಂದುವರೆರಿಸುವುದರ ಕುರಿತು ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದರು. ಆದರೆ ವಾದಗಳು ನಡೆಯಲಿಲ್ಲ. ಕಾಂಗ್ರೆಸ್ ಜತೆ ಸಾಗುವುದಕ್ಕೆ ಹೆಚ್ಚಿನವರಿಂದ ಸಹಮತ ದೊರಕಿತು ಎನ್ನಲಾಗಿದೆ.
ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಳ್ಳುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿಗೆ ಸಮರ್ಥ ಎದುರಾಳಿ ಕಾಂಗ್ರೆಸ್ ಅಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಲಯಾಳ ವಾರಪತ್ರಿಕೆ ‘ಚಿಂತ’ದಲ್ಲಿ ಲೇಖನ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಒಮ್ಮತ ಮೂಡುವುದು ಕಷ್ಟ ಎಂದೇ ಭಾವಿಸಲಾಗಿತ್ತು. ಆದರೆ ಅಂಥ ವಿರೋಧ ಉಂಟಾಗಲಿಲ್ಲ ಎಂದು ಮೂಲಗಳು ಹೇಳಿವೆ.