ದೆಹಲಿ: ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) ಆರು ಸದಸ್ಯರ ಸ್ಥಾಯಿ ಸಮಿತಿಯ ಚುನಾವಣೆ ವೇಳೆ ಶುಕ್ರವಾರ ಆಡಳಿತ ಪಕ್ಷ ಎಎಪಿ ಮತ್ತು ವಿರೋಧ ಪಕ್ಷ ಬಿಜೆಪಿ ಸದಸ್ಯರ ನಡುವೆ ನಡೆದ ಘರ್ಷಣೆಯು ಶಾಸಕಿ ಅತಿಶಿ ಸೃಷ್ಟಿ ಎಂದು ಆರೋಪಿಸಿರುವ ಬಿಜೆಪಿ, ಅವರನ್ನು ‘ವಿಲನ್’ ಎಂದು ದೂಷಿಸಿದೆ.
ಎಎಪಿ ಶಾಸಕಿ ಅತಿಶಿ, ದುರ್ಗೇಶ್ ಪಾಠಕ್, ಮೇಯರ್ ಶೆಲ್ಲಿ ಒಬೆರಾಯ್ ಅವರ ಚಿತ್ರವನ್ನು ವ್ಯಂಗ್ಯವಾಗಿ ಚಿತ್ರಿಸಿರುವ ಅಣಕು ಸಿನಿಮಾ ಪೋಸ್ಟರ್ ಅನ್ನು ಟ್ವೀಟ್ ಮಾಡಿರುವ ದೆಹಲಿ ಬಿಜೆಪಿ, ಪಾಲಿಕೆ ಸಭೆಯಲ್ಲಿ ಹಿಂಸೆ ಮತ್ತು ಸರ್ವಾಧಿಕಾರವನ್ನು ಸಂಘಟಿಸಿದ ಎಎಪಿಯ ಖಳನಾಯಕರು ಎಂದು ಕಿಡಿಕಾರಿದೆ.
ಈ ಕುರಿತಂತೆ ಎಎಪಿ ಶಾಸಕಿ ಅತಿಶಿ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸ್ಥಾಯಿ ಸಮಿತಿ ಚುನಾವಣೆ ವೇಳೆ ಬಿಜೆಪಿ ಸದಸ್ಯರಿಂದ ಚಲಾವಣೆಯಾದ ಒಂದು ಮತ ಅಸಿಂಧುವೆಂದು ಮೇಯರ್ ಶೆಲ್ಲಿ ಘೋಷಿಸಿದ್ದರಿಂದ ಬಿಜೆಪಿ ಸದಸ್ಯರ ತೀವ್ರ ಪ್ರತಿಭಟನೆಗೆ ಸಭೆ ಸಾಕ್ಷಿಯಾಯ್ತು.
ಶೆಲ್ಲಿ ಅವರು ಫಲಿತಾಂಶ ಘೋಷಣೆ ಆರಂಭಿಸುತ್ತಿದ್ದಂತೆ ಎರಡೂ ಪಕ್ಷಗಳ ಕೌನ್ಸಿಲರ್ಗಳ ನಡುವಿನ ಘರ್ಷಣೆ ಹಿಂಸಾತ್ಮಕ ರೂಪಕ್ಕೆ ತಿರುಗಿತು. ಈ ಸಂದರ್ಭ ಒಬ್ಬ ಎಎಪಿ ಶಾಸಕ ಕುಸಿದುಬಿದ್ದ ಘಟನೆಯೂ ನಡೆದಿತ್ತು.