ಐಜ್ವಾಲ್: ಮಿಜೋರಾಂ ಮತ್ತು ಅಸ್ಸಾಂನ ಗಡಿ ಭಾಗದಲ್ಲಿ ಇತ್ತೀಚೆಗೆ ನಡೆದಿದ್ದ ಸಂಘರ್ಷದಲ್ಲಿ ಬಾಹ್ಯ ಶಕ್ತಿಗಳ ಪಾತ್ರವಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಮಿಜೋರಾಂನ ಅತಿ ದೊಡ್ಡ ಮತ್ತು ಪ್ರಭಾವಶಾಲಿ ಸಂಘಟನೆಯಾದ ಯಂಗ್ ಮಿಜೊ ಅಸೋಸಿಯೇಷನ್ ಅಥವಾ ಸೆಂಟ್ರಲ್ ವೈಎಂಎ (ಸಿವೈಎಂಎ) ಆಗ್ರಹಿಸಿದೆ.
ಸಂಘಟನೆಯ ಸಭೆ ಮಂಗಳವಾರ ನಡೆದಿದ್ದು, ಈ ಕುರಿತು ಕೇಂದ್ರ ಸರ್ಕಾರದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಿವೈಎಂಎ ಅಧ್ಯಕ್ಷ ವನ್ಲಾಲ್ರುವಾಟಾ ತಿಳಿಸಿದರು.
ಅಸ್ಸಾಂ ಮತ್ತು ಮಿಜೋರಾಂ ನಡುವಿನ ಗಡಿ ಉದ್ವಿಗ್ನತೆಯನ್ನು ಹೊರಗಿನ ಶಕ್ತಿಗಳು ಉತ್ತೇಜಿಸಿವೆ ಎಂದು ಆರೋಪಿಸಿ ಕೇಂದ್ರ ಸಚಿವ ಕಿರಣ್ ರಿಜಿಜು ಅವರ ನೇತೃತ್ವದ ಈಶಾನ್ಯದ ಬಿಜೆಪಿ ಸಂಸದರ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ತಿಳಿಸಿತ್ತು. ಈ ವೇಳೆ ನಿಯೋಗ ಸಲ್ಲಿಸಿದ್ದ ಮನವಿಯಲ್ಲಿ ಎರಡೂ ರಾಜ್ಯಗಳ ಗಡಿ ಸಮಸ್ಯೆ ಬಗೆಹರಿಸಲು ಪ್ರಧಾನಿಯವರು ಮಧ್ಯ ಪ್ರವೇಶಿಸಬೇಕು ಎಂದು ಕೋರಲಾಗಿತ್ತು.
ಇದಾದ ಮರುದಿನವೇ ಸಿವೈಎಂಎ ಈ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದೆ.
ಅದಾಗ್ಯೂ, ಈ ಆರೋಪ ಸಂಪೂರ್ಣ ಸುಳ್ಳು ಎಂದು ಹೇಳಿರುವ ಸಿವೈಎಂಎ ಅಧ್ಯಕ್ಷರು, ರಿಜಿಜು ಅವರೊಂದಿಗೆ ನಿಯೋಗದಲ್ಲಿ ಮಿಜೋರಾಂನ ಯಾವುದೇ ಸಂಸದರು ಇರಲಿಲ್ಲ ಎಂದಿದೆ.