ನವದೆಹಲಿ: ಸೆಪ್ಟೆಂಬರ್ 23ರಂದು ಸ್ವತಃ ಹಾಜರಾಗಿ ಹೇಳಿಕೆ ನೀಡುವಂತೆ ಫೇಸ್ಬುಕ್ ಇಂಡಿಯಾದ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಅವರಿಗೆ ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸಾಮರಸ್ಯ ಸಮಿತಿ ಭಾನುವಾರ ಮತ್ತೆ ನೋಟಿಸ್ ನೀಡಿದೆ.
ಹಾಜರಾಗದೇ ಇದ್ದರೆ ಅದನ್ನು ಸಮಿತಿಗೆ ಇರುವ ಸಾಂವಿಧಾನಿಕ ಅಧಿಕಾರದ ಉಲ್ಲಂಘನೆ ಎಂದುಪರಿಗಣಿಸಬೇಕಾಗುತ್ತದೆ ಎಂದು ಸಮಿತಿ ಎಚ್ಚರಿಸಿದೆ.
ಈ ಹಿಂದೆ, ಸಭೆಗೆ ಹಾಜರಾಗುವಂತೆ ಅಜಿತ್ ಮೋಹನ್ ಅವರಿಗೆ ನೋಟಿಸ್ ನೀಡಲಾಗಿತ್ತು. ಅವರು ಹಾಜರಾಗಿರಲಿಲ್ಲ. ಹಾಗಾಗಿ, ಇದು ಅವರಿಗೆ ಕೊನೆಯ ಎಚ್ಚರಿಕೆ ಎಂದುಆಮ್ ಆದ್ಮಿ ಪಕ್ಷದ ಶಾಸಕ ರಾಘವ್ ಚಡ್ಡಾ ನೇತೃತ್ವದ ಸಮಿತಿ ಹೇಳಿದೆ. ಸಮಿತಿಯ ಮುಂದೆ ಹಾಜರಾಗದೆ ಇರುವುದು ದೆಹಲಿ ವಿಧಾನಸಭೆ ಮತ್ತು ಜನರಿಗೆ ಮಾಡಿದ ಅವಮಾನ ಎಂದು ಚಡ್ಡಾ ಹೇಳಿದ್ದಾರೆ.
ಸಂಸದೀಯ ಸ್ಥಾಯಿ ಸಮಿತಿಯ ಆದೇಶಕ್ಕೆ ಫೇಸ್ಬುಕ್ ಗೌರವ ನೀಡಿದ ರೀತಿಯಲ್ಲೇದೆಹಲಿಯ ವಿಧಾನ ಸಭೆಯ ಸಮಿತಿಯನ್ನೂಫೇಸ್ಬುಕ್ ಗೌರವಿಸಬೇಕು ಎಂದು ಅವರು ಹೇಳಿದ್ದಾರೆ.ಫೆಬ್ರುವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆಗೆ ಫೇಸ್ಬುಕ್ ಕೂಡ ಕಾರಣ ಎಂಬ ಆರೋಪವನ್ನು ಸಮಿತಿ ಗಣನೆಗೆ ತೆಗೆದುಕೊಂಡಿದೆ. ಗಲಭೆ ಬಳಿಕ ಫೇಸ್ಬುಕ್ನಲ್ಲಿ ಆಕ್ಷೇಪಾರ್ಹವಾದ ಪೋಸ್ಟ್ಗಳು ಕಂಡುಬಂದಿದ್ದವು ಎಂಬುದನ್ನು ಸಮರ್ಥಿಸುವ ದಾಖಲೆಗಳನ್ನು ಸಮಿತಿಗೆ ಸಲ್ಲಿಸಲಾಗಿದೆ.
‘ಸಂಸ್ಥೆ ವಿರುದ್ಧ ಮಾಡಲಾಗಿರುವ ಆರೋಪಗಳಿಗೆ ಸ್ಪಷ್ಟನೆ ಕೇಳುವುದು ಹಾಗೂ ಬಳಕೆದಾರರಲ್ಲಿ ವಿಶ್ವಾಸ ಮರುಸ್ಥಾಪಿಸುವ ಉದ್ದೇಶದಿಂದ ಫೇಸ್ಬುಕ್ನ ಭಾರತದ ಪ್ರತಿನಿಧಿ ಅಜಿತ್ ಮೋಹನ್ ಅವರನ್ನು ವಿಚಾರಣೆಗೆ ಕರೆಯಲಾಗಿದೆ’ ಎಂದು ಸಮಿತಿ ಹೊರಡಿಸಿರುವ ಪ್ರಕಟಣೆ ತಿಳಿಸಿದೆ.
ಫೇಸ್ಬುಕ್ ಸ್ಪಷ್ಟನೆ
ಬಿಜೆಪಿ ಮುಖಂಡರ ವಿರುದ್ಧದ ದ್ವೇಷ ಭಾಷಣ ವಿಚಾರಗಳನ್ನು ನಿಭಾಯಿಸುವಲ್ಲಿ ತಾರತಮ್ಮ ಮಾಡಿಲ್ಲ ಎಂದು ಅಜಿತ್ ಮೋಹನ್ ಸ್ಪಷ್ಟಪಡಿಸಿದ್ದಾರೆ. ತಟಸ್ಥ, ವಸ್ತುನಿಷ್ಠ ಹಾಗೂ ನಿಷ್ಪಕ್ಷಪಾತ ನಿಲುವಿಗೆ ಫೇಸ್ಬುಕ್ ಬದ್ಧವಾಗಿದೆ ಎಂದಿದ್ದಾರೆ.
ಫೇಸ್ಬುಕ್ ನಿರ್ಧಾರಗಳು ರಾಜಕೀಯ ವ್ಯಕ್ತಿಗಳಿಂದ ಪ್ರಭಾವಿತವಾಗಿವೆ ಎಂಬ ಆರೋಪವನ್ನು ಮೋಹನ್ ತಳ್ಳಿಹಾಕಿದ್ದಾರೆ.ಯಾವುದೇ ವ್ಯಕ್ತಿ ಪ್ರಭಾವ ಬೀರದ ರೀತಿಯಲ್ಲಿ ವೇದಿಕೆಯನ್ನು ವಿನ್ಯಾಸಗೊಳಿಸಲಾಗಿದೆ. ಯಾರು ಬೇಕಾದರೂ ತಮ್ಮ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದಿದ್ದಾರೆ.
ದ್ವೇಷಭಾಷಣವೂ ಸೇರಿದಂತೆ ಪ್ರಮುಖ ವಿಷಯಗಳ ಜಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವ ತಂಡವು (ಕಂಟೆಂಟ್) ಸಾರ್ವಜನಿಕ ನೀತಿ ಜಾರಿ (ಸರ್ಕಾರಿ) ತಂಡದಿಂದ ಪ್ರತ್ಯೇಕವಾಗಿದ್ದು, ಸ್ವತಂತ್ರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.