ನವದೆಹಲಿ: ಕೃಷಿ ಮಸೂದೆಗಳನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒಬ್ರಿಯಾನ್ ಹಾಗೂ ಇತರ 7 ಸಂಸದರನ್ನು ಒಂದು ವಾರದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.
ಡೆರೆಕ್ ಒಬ್ರಿಯಾನ್ ಜೊತೆ ಸಂಜಯ್ ಸಿಂಗ್ (ಎಎಪಿ), ರಾಜೀವ್ ಸಾತವ್ (ಕಾಂಗ್ರೆಸ್), ಕೆ.ಕೆ.ರಾಗೇಷ್ (ಸಿಪಿಐ), ಸಯ್ಯದ್ ನಾಸಿರ್ ಹುಸೇನ್, ರಿಪು ಬೋರಾ (ಕಾಂಗ್ರೆಸ್), ದೋಲಾ ಸೇನ್ (ಟಿಎಂಸಿ), ಎಳಮರಂ ಕರೀಂ (ಸಿಪಿಐಎಂ) ಅಮಾನತುಗೊಂಡಿದ್ದಾರೆ.
ಈ ಸಂಸದರಿಗೆ ಸದನದಿಂದ ತೆರಳುವಂತೆ ಉಪ ರಾಷ್ಟ್ರಪತಿ,ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಸೂಚಿಸಿದ್ದಾರೆ.
ಕೃಷಿ ಮಸೂದೆಗಳ ಮಂಡನೆ ವೇಳೆ ಭಾನುವಾರ ರಾಜ್ಯಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಮಸೂದೆಗಳನ್ನು ಪರಿಶೀಲನಾ ಸಮಿತಿಗೆ ಕಳಿಸುವ ನಿರ್ಣಯವನ್ನು ಧ್ವನಿಮತಕ್ಕೆ ಹಾಕುವುದಾಗಿ ಉಪ ಸಭಾಪತಿ ಹರಿವಂಶ ಸಿಂಗ್ ಪ್ರಕಟಿಸಿದಾಗ ವಿರೋಧ ಪಕ್ಷಗಳ ಆಕ್ರೋಶ ಕಟ್ಟೆಯೊಡೆದಿತ್ತು.
ಘೋಷಣೆ ಕೂಗುತ್ತ ಸಭಾಪತಿ ಪೀಠದತ್ತ ನುಗ್ಗಿದ್ದ ಡೆರೆಕ್ ಒಬ್ರಿಯಾನ್, ರೂಲ್ ಬುಕ್ ಎತ್ತಿಕೊಂಡು ಹರಿಯಲು ಯತ್ನಿಸಿದ್ದರು. ಅವರನ್ನು ಸೇರಿಕೊಂಡ ವಿರೋಧ ಪಕ್ಷಗಳ ಸದಸ್ಯರು ಕೈಗೆ ಸಿಕ್ಕ ಮೈಕ್ರೊಫೋನ್ಗಳನ್ನು ಮುರಿದು ಹಾಕಿದ್ದರು. ಕಾಗದದ ಚೂರುಗಳನ್ನು ಹರಿದು ತೂರಿದ್ದರು. ಟೇಬಲ್ಗಳ ಮೇಲೆ ಹತ್ತಿ ನಿಂತು ಘೋಷಣೆ ಕೂಗಿದ್ದರು.