ನವದೆಹಲಿ: ‘ಕೋವಿಡ್ ಎರಡನೇ ಅಲೆಯನ್ನು ತಡೆಯುವ ಸಿದ್ಧತೆ ಮಾಡಿಕೊಳ್ಳಲು ಒಂದು ವರ್ಷದ ಕಾಲಾವಕಾಶ ಇದ್ದರೂ ಸರ್ಕಾರವು ಅದನ್ನು ಮಾಡಿಕೊಳ್ಳಲಿಲ್ಲ. ಬದಲಿಗೆ ತಾತ್ಕಾಲಿಕ ಪರಿಹಾರಗಳನ್ನಷ್ಟೇ ಮಾಡಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು ಕೋವಿಡ್–19 ನಿರ್ವಹಣೆ ವಿಚಾರವಾಗಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
‘ಕೋವಿಡ್ ವಿರುದ್ಧದ ಹೋರಾಟವು ರಾಷ್ಟ್ರೀಯ ವಿಚಾರ, ಇದನ್ನು ಪಕ್ಷ ರಾಜಕಾರಣದಿಂದ ಹೊರಗಿಡಬೇಕು. ಇಂಥ ಸಂದರ್ಭದಲ್ಲಿ ಕೇಂದ್ರವು ‘ರಾಜಧರ್ಮವನ್ನು’ ಪಾಲಿಸಬೇಕು. ಆದರೆ, ಬಿಜೆಪಿಯೇತರ ಪಕ್ಷಗಳ ಆಳ್ವಿಕೆ ಇರುವ ರಾಜ್ಯಗಳ ಬೇಡಿಕೆಗಳ ವಿಚಾರದಲ್ಲಿ ಕೇಂದ್ರವು ದಿವ್ಯ ಮೌನ ವಹಿಸುತ್ತಿದೆ. ಇತರ ಕೆಲವು ರಾಜ್ಯಗಳಿಗೆ ಆದ್ಯತೆಯ ಮೇರೆಗೆ ಸೌಲಭ್ಯಗಳು ಲಭಿಸುತ್ತಿವೆ ಎಂದು ಸೋನಿಯಾ ಆರೋಪಿಸಿದರು.
ಲಸಿಕೆಯ ರಫ್ತನ್ನು ಸ್ಥಗಿತಗೊಳಿಸಲು ಒತ್ತಾಯಿಸಿರುವ ಸೋನಿಯಾ, ‘ನಮ್ಮದೇ ದೇಶದ ಜನರು ಸಾಯುತ್ತಿರುವಾಗ, ಇತರ ದೇಶಗಳಿಗೆ ಲಸಿಕೆಯನ್ನು ನೀಡುವ ಮೂಲಕ ನಮ್ಮ ಔದಾರ್ಯದ ಬಗ್ಗೆ ಹೆಮ್ಮೆಪಟ್ಟುಕೊಳ್ಳಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.