ದಿಶಾ ರವಿ ಬಂಧನ: ರಾಷ್ಟ್ರ ವಿರೋಧಿ ಬೀಜಗಳು ನಾಶವಾಗಬೇಕಿದೆ ಎಂದ ಹರಿಯಾಣ ಸಚಿವ

ನವದೆಹಲಿ: ದಿಶಾ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಟ್ವೀಟ್ ಮಾಡಿರುವ ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್, 'ರಾಷ್ಟ್ರ ವಿರೋಧಿ ಬೀಜಗಳನ್ನು ಸಂಪೂರ್ಣವಾಗಿ ನಾಶಗೊಳಿಸಬೇಕಿದೆ' ಎಂದು ಹೇಳಿದ್ದಾರೆ.
'ಯಾರು ತಮ್ಮ ಮನಸ್ಸಿನಲ್ಲಿ ರಾಷ್ಟ್ರ ವಿರೋಧಿ ಬೀಜವನ್ನು ಇಟ್ಟುಕೊಂಡಿದ್ದಾರೋ, ಅವರು ಸಂಪೂರ್ಣವಾಗಿ ನಾಶವಾಗಬೇಕು. ಅದು ದಿಶಾ ರವಿ ಆಗಿರಲಿ ಅಥವಾ ಬೇರೆಯವರೇ ಆಗಿರಲಿ' ಎಂದು ಬಿಜೆಪಿ ಹಿರಿಯ ನಾಯಕ ಅನಿಲ್ ವಿಜ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಪರಿಸರ ಕಾರ್ಯಕರ್ತೆ, 21 ವರ್ಷದ ದಿಶಾ ರವಿ ಅವರನ್ನು ದೆಹಲಿಯ ಸೈಬರ್ ಪೊಲೀಸರು ಬೆಂಗಳೂರಿನಲ್ಲಿ ಶನಿವಾರ ಬಂಧಿಸಿದ್ದಾರೆ. ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಜೊತೆ ದಿಶಾ ರವಿ ಅವರು ಟೂಲ್ಕಿಟ್ ಅನ್ನು ಹಂಚಿಕೊಂಡಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಅವರು ಟ್ವೀಟ್ನಲ್ಲಿ ರೈತರ ಹೋರಾಟಕ್ಕೆ ಬೆಂಬಲ ನೀಡುವುದು ಹೇಗೆ ಎಂಬುದನ್ನು ವಿವರಿಸುವ ‘ಟೂಲ್ಕಿಟ್’ ಅನ್ನು ಹಂಚಿಕೊಂಡಿದ್ದರು. ಇದರ ಸೃಷ್ಟಿಕರ್ತರಿಗೆ ಸಂಬಂಧಿಸಿದ ಇಮೇಲ್ ಐಡಿ, ಯುಆರ್ಎಲ್ಗಳು ಮತ್ತು ಕೆಲವು ಸಾಮಾಜಿಕ ಮಾಧ್ಯಮಗಳ ಖಾತೆಗಳ ಬಗ್ಗೆ ಮಾಹಿತಿ ನೀಡುವಂತೆ ದೆಹಲಿ ಪೊಲೀಸರು ಗೂಗಲ್ ಮತ್ತು ಸಾಮಾಜಿಕ ಮಾಧ್ಯಮ ಸಂಸ್ಥೆಗಳನ್ನು ಈ ಹಿಂದೆ ಕೇಳಿದ್ದರು.
ಅಲ್ಲದೆ, ಭಾರತ ಸರ್ಕಾರದ ವಿರುದ್ಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಯುದ್ಧ ಸಾರಲಾಗಿದೆ ಎಂದು ಆರೋಪಿಸಿ ದೆಹಲಿ ಸೈಬರ್ ಪೊಲೀಸರು ಖಲಿಸ್ತಾನ ಪರ ಹೋರಾಟಗಾರರು ಮತ್ತು ಟೂಲ್ಕಿಟ್ ಸೃಷ್ಟಿಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಇವುಗಳನ್ನೂ ಓದಿ...
ದಿಶಾ ಬಂಧನ; ಪ್ರಜಾಪ್ರಭುತ್ವ ಮೇಲೆ ಹಿಂದೆಂದೂ ಕಂಡಿಲ್ಲದ ರೀತಿಯ ದಾಳಿ: ಕೇಜ್ರಿವಾಲ್
ದಿಶಾ ರವಿಗೆ ಬೆಂಬಲ ಸೂಚಿಸಿದ ಕಾಂಗ್ರೆಸ್, ವಿಪಕ್ಷ ನಾಯಕರು
‘ಟೂಲ್ಕಿಟ್’ ಸಿದ್ಧಪಡಿಸಿದ ಆರೋಪ: ಬೆಂಗಳೂರಿನ ಯುವತಿ ಸೆರೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.