ಚೆನ್ನೈ: ತಮಿಳುನಾಡು ವಿಧಾನಸಭೆಯ 2021–22ನೇ ಆರ್ಥಿಕ ವರ್ಷದ ಮಧ್ಯಂತರ ಬಜೆಟ್ ಮಂಡನೆಯನ್ನು ಬಹಿಷ್ಕರಿಸಿ ವಿರೋಧ ಪಕ್ಷ ಡಿಎಂಕೆ ಸದಸ್ಯರು ಮಂಗಳವಾರ ಸಭಾತ್ಯಾಗ ಮಾಡಿದರು.
ಬಜೆಟ್ ಮಂಡನೆಗೂ ಮುನ್ನ ವಿರೋಧ ಪಕ್ಷಕ್ಕೆ ಮಾತನಾಡಲು ಅವಕಾಶ ನೀಡಬೇಕು ಎಂದು ಕೋರಿ ಡಿಎಂಕೆ ಉಪ ನಾಯಕ ದೊರೈಮುರಗನ್ ಅವರು ಸ್ಪೀಕರ್ ಪಿ. ಧನ್ಪಾಲ್ ಅವರಿಗೆ ಮನವಿ ಮಾಡಿದರು. ಆದರೆ ಇದಕ್ಕೆ ಅನುಮತಿ ನಿರಾಕರಿಸಿದರು.
ದೂರೈಮುರಗನ್ ಅವರಿಗೆ ಬಜೆಟ್ ಬಗ್ಗೆ ಪಕ್ಷದ ಅಭಿಪ್ರಾಯವನ್ನು ತಿಳಿಸಲು ಅವಕಾಶ ನೀಡಬೇಕು ಎಂದು ಡಿಎಂಕೆ ಸದಸ್ಯರು ಪಟ್ಟು ಹಿಡಿದರು. ತಮಿಳುನಾಡು ಉಪಮುಖ್ಯಮಂತ್ರಿ ಪನ್ನೀರ್ಸೆಲ್ವಂ ಅವರು ಬಜೆಟ್ ಮಂಡನೆ ಪ್ರಕ್ರಿಯೆ ಆರಂಭಿಸಿದ ತಕ್ಷಣ ಇದನ್ನು ವಿರೋಧಿಸಿ ಸದನದಿಂದ ಹೊರ ನಡೆದರು.