ನವದೆಹಲಿ: ‘ಮೂರು ಕೃಷಿ ಕಾಯ್ದೆಗಳಿಗೆ ಈಗಾಗಲೇ ತಡೆ ನೀಡಲಾಗಿದೆ. ಕಾನೂನು ಜಾರಿಗೆ ಬರದೇ ಇರುವ ಈ ಸಂದರ್ಭದಲ್ಲಿ ರೈತ ಸಂಘಟನೆಗಳು ಯಾಕಾಗಿ ಪ್ರತಿಭಟಿಸುತ್ತಿವೆ? ಎಂದು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನೆ ಮಾಡಿದೆ.
ಕಾಯ್ದೆಗಳ ಸಿಂಧುತ್ವವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆ ಹೋದ ನಂತರ ಪ್ರತಿಭಟನೆ ನಡೆಸುವ ಪ್ರಶ್ನೆ ಎಲ್ಲಿ ಉದ್ಭವವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಎ. ಎಂ. ಖಾನ್ವಿಲ್ಕರ್ ಮತ್ತು ಸಿ ಟಿ ರವಿಕುಮಾರ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠ ಕೇಳಿದೆ.
ಇದೇ ವೇಳೆ, ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ಅವರು ಉತ್ತರ ಪ್ರದೇಶದ ಲಖಿಂಪುರ್ ಖೇರಿ ದುರ್ಘಟನೆಯನ್ನುಉಲ್ಲೇಖಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅಂತಹ ಘಟನೆಗಳು ಸಂಭವಿಸಿದಾಗ ಯಾರೂ ಅದರ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿತು.
‘ಒಂದು ವಿಚಾರವಾಗಿ ಯಾರಾದರೂ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದರೆ, ಅವರು ಅದೇ ವಿಚಾರವಾಗಿ ಮತ್ತೆ ಬೀದಿಗಿಳಿಯುವಂತಿಲ್ಲ’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು.
ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿದೆಹಲಿಯ ಜಂತರ್ ಮಂತರ್ನಲ್ಲಿ 'ಸತ್ಯಾಗ್ರಹ' ನಡೆಸಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.