ಗೊಂದಲದ ಗೂಡಾಗಿರುವ ಆದಾಯ ತೆರಿಗೆಯ ಹೊಸ ಪೋರ್ಟಲ್: ಶಶಿತರೂರ್ ಆರೋಪ

ನವದೆಹಲಿ: ಆದಾಯ ತೆರಿಗೆಯ ಹೊಸ ಪೋರ್ಟಲ್(ಜಾಲತಾಣದ) ನ್ಯೂನತೆಗಳಿಂದ ಕೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ನ ಹಿರಿಯ ನಾಯಕ ಶಶಿ ತರೂರ್, ₹4200 ಕೋಟಿ ವೆಚ್ಚ ಮಾಡಿದರೂ ಅದನ್ನು ‘ಬಳಕೆದಾರ ಸ್ನೇಹಿ‘ಯಾಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಅಖಿಲ ಭಾರತ ವೃತ್ತಿಪರ ಕಾಂಗ್ರೆಸ್‘ ಘಟಕದ ಅಧ್ಯಕ್ಷರಾಗಿರುವ ಶಶಿ ತರೂರ್, ‘ಆದಾಯ ತೆರಿಗೆಯ ಹೊಸ ಪೋರ್ಟೆಲ್ನಲ್ಲಿರುವ ಬದಲಾವಣೆಗಳು ತೆರಿಗೆದಾರರಿಗೆ ತುಂಬಾ ಕಿರಿಕಿರಿ ಉಂಟು ಮಾಡುತ್ತಿವೆ. ಪೋರ್ಟಲ್ನಲ್ಲಿ ಮಾಹಿತಿ ಹುಡುಕಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ‘ ಎಂದು ನಮ್ಮ ಘಟಕದ ಲೆಕ್ಕಪತ್ರ ಪರಿಶೋಧಕರು ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಹೊಸ ಪೋರ್ಟಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಕಾರಣದಿಂದಾಗಿ ಐಟಿಆರ್ (ಆದಾಯ ತೆರಿಗೆ ರಿಟರ್ನ್) ಸಲ್ಲಿಕೆ, 15 ಸಿಎ / ಸಿಬಿ ಫಾರ್ಮ್ಗಳು, ಡೇಟಾ ತಯಾರಿಕೆ ಪ್ರಕ್ರಿಯೆಯೂ ಸ್ಥಗಿತಗೊಂಡಿದೆ‘ ಎಂದು ತರೂರ್ ಹೇಳಿದ್ದಾರೆ.
‘ಜೂನ್ ತಿಂಗಳಲ್ಲಿ ಆದಾಯ ತೆರಿಗೆ ಪೋರ್ಟಲ್ ಬದಲಾಯಿಸಿರುವುದರ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಸ್ವಲ್ಪ ಬುದ್ದಿವಂತಿಕೆ ಉಪಯೋಗಿಸಿ, ಹಣಕಾಸು ವರ್ಷದ ಅಂತ್ಯ ಅಥವಾ ಹೊಸ ಹಣಕಾಸು ವರ್ಷದ ಆರಂಭಕ್ಕೆ ಮುನ್ನವೇ ಈ ಬದಲಾವಣೆ ಮಾಡಿದ್ದರೆ, ಸಂಕಷ್ಟದಲ್ಲಿರುವ ಆದಾಯ-ತೆರಿಗೆ ಮರುಪಾವತಿಗೆ ಅರ್ಹರಾದ ತೆರಿಗೆದಾರರಿಗೆ ಅನುಕೂಲವಾಗುತ್ತಿತ್ತು‘ ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.
‘ಆದಾಯ ತೆರಿಗೆಯ ಹಳೆಯ ಪೋರ್ಟಲ್ ಸುಗಮವಾಗಿ ನಡೆಯುತ್ತಿತ್ತು. ತೆರಿಗೆದಾರರು ರಿಟರ್ನ್ಸ್ ಮತ್ತು ಮರುಪಾವತಿಗೆ ಅರ್ಜಿ ಸಲ್ಲಿಸುವಂತಹ ಈ ಸಂದರ್ಭದಲ್ಲಿ ಹೊಸ ಪೋರ್ಟಲ್ ಪರಿಚಯಿಸುವ ಅಗತ್ಯ ಏನಿತ್ತು‘ ಎಂದು ಶಶಿ ತರೂರ್ ಕೇಂದ್ರದ ವಿರುದ್ಧ ಹರಿಯಾಯ್ದಿದ್ದಾರೆ. ಇದೇ ವೇಳೆ, ‘ಹೊಸ ಪೋರ್ಟಲ್ಗೆ ಚಾಲನೆ ನೀಡುವ ಮುನ್ನ ಅದನ್ನು ಏಕೆ ಪರೀಕ್ಷಿಸಲಿಲ್ಲ‘ ಎಂದು ತರೂರ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.