ಎನ್ಡಿಟಿವಿ ಗುಂಪು ದಾಳಿಯ ಬಗ್ಗೆ ಸುಳ್ಳು ವರದಿ ಮಾಡಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಇಬ್ಬರು ಪುರುಷರು ಮಾತ್ರವೇ ಅಂಗಡಿಯೊಳಗೆ ಪ್ರವೇಶಿಸಿದ್ದು, ನಾಲ್ಕರಿಂದ ಐದು ಮಂದಿ ಮಳಿಗೆಯ ಹೊರಗೆ ನಿಂತಿದ್ದರು. ಒಳಗೆ ಪ್ರವೇಶಿಸಿದ್ದ ರಮೇಶ್ ಅಹಿರ್ ಎಂಬುವವರು ಸಿಬ್ಬಂದಿಗೆ ಕ್ಷಮಾಪಣೆ ಪತ್ರ ಬರೆಯುವಂತೆ ಒತ್ತಾಯಿಸಿದ್ದಾರೆ. ಈಗಾಗಲೇ ಇಂಗ್ಲಿಷ್ನಲ್ಲಿ ಕ್ಷಮಾಪಣೆ ಪತ್ರ ಬರೆದು ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಸ್ಥಳೀಯರಿಗೂ ಅರ್ಥವಾಗುವ ಹಾಗೆ ಗುಜರಾತಿ ಭಾಷೆಯಲ್ಲಿ ಕ್ಷಮಾಪಣೆ ಬರೆಯುವಂತೆ ಅಹಿರ್ ಈ ವೇಳೆ ಒತ್ತಾಯಿಸಿದ್ದಾರೆ. ಸಿಬ್ಬಂದಿಗೆ ಗುಜರಾತಿ ಬಾರದ ಕಾರಣ ‘ನೀವೆ ಗುಜರಾತಿಯಲ್ಲಿ ಕ್ಷಮಾಪಣೆ ಬರೆಯಿರಿ’ ಎಂದು ರಮೇಶ್ ಅವರಿಗೆ ತಿಳಿಸಿದ್ದಾರೆ. ರಮೇಶ್ ಖಾಲಿ ಕಾಗದದ ಮೇಲೆ ಕ್ಷಮಾಪಣೆ ಬರೆದು, ಮಳಿಗೆಯ ವ್ಯವಸ್ಥಾಪಕರ ಅನುಮೋದನೆ ಪಡೆದು ಅದನ್ನು ಮಳಿಗೆಯ ಪ್ರವೇಶದ್ವಾರದಲ್ಲಿ ಅಂಟಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.