ಕೋಲ್ಕತ್ತ: ಇಲ್ಲಿನ ನೇತಾಜಿ ಸುಭಾಶ್ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ದಟ್ಟ ಮಂಜು ಆವರಿಸಿದ್ದರಿಂದ ವಿಮಾನಯಾನಕ್ಕೆ ಅಡಚಣೆ ಉಂಟಾಯಿತು. ಇದರಿಂದಾಗಿ ನೂರಾರು ಪ್ರಯಾಣಿಕರಿಗೆ ತೊಂದರೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಜಿನಿಂದಾಗಿ ಯಾವುದೇ ವಿಮಾನ ಟೇಕ್ ಆಫ್ ಮತ್ತು ಲ್ಯಾಂಡ್ ಆಗಲು ಸಾಧ್ಯವಾಗಲಿಲ್ಲ. ಕೋಲ್ಕತ್ತಾದಿಂದ ಮುಂಜಾನೆ ಹೊರಡಬೇಕಾಗಿದ್ದ ಎಲ್ಲ ವಿಮಾನಗಳ ಹಾರಾಟದ ವೇಳೆಯಲ್ಲಿ ವಿಳಂಬವಾಯಿತು.
ಲ್ಯಾಂಡ್ ಆಗಬೇಕಿದ್ದ ಬಹುತೇಕ ವಿಮಾನಗಳನ್ನು ಸಮೀಪದ ವಿಮಾನ ನಿಲ್ದಾಣಗಳಲ್ಲಿ ಇಳಿಯಲು ಸೂಚಿಸಲಾಯಿತು. ಬಹುತೇಕ ವಿಮಾನಗಳು ರಾಂಚಿ ವಿಮಾನ ನಿಲ್ದಾಣದಲ್ಲಿ ಇಳಿದವು ಎಂದು ಅಧಿಕೃತ ಮೂಲಗಳು ತಿಳಿಸಿವೆ.