ಚೆನ್ನೈ: ಹೆಲಿಕಾಪ್ಟರ್ ಪತನದಲ್ಲಿ ಸಾವಿಗೀಡಾದವರ ಪೈಕಿ ಒಂಬತ್ತು ದೇಹಗಳ ಗುರುತು ಪತ್ತೆ ಮಾಡುವುದು ಕಷ್ಟವಾಗಿದ್ದು, ಪಾರ್ಥಿವ ಶರೀರಗಳನ್ನು ಕುಟುಂಬದವರಿಗೆ ತಲುಪಿಸುವುದಕ್ಕೂ ಮುನ್ನ ನವದೆಹಲಿಯಲ್ಲಿ ಡಿಎನ್ಎ ಪರೀಕ್ಷೆ ನಡೆಸಲು ನಿರ್ಧರಿಸಿರುವುದಾಗಿ ವರದಿಯಾಗಿದೆ.
ಎಲ್ಲ ಪಾರ್ಥಿವ ಶರೀರಗಳನ್ನು ನವದೆಹಲಿಗೆ ತರಲಾಗುತ್ತಿದ್ದು, ಡಿಎನ್ಎ ಪರೀಕ್ಷೆ ನಡೆಸಿ ಗುರುತು ಪತ್ತೆಯಾದ ಬಳಿಕ ಸಂಬಂಧಿಕರಿಗೆ ಶರೀರಗಳನ್ನು ಹಸ್ತಾಂತರಿಸಲಾಗುತ್ತದೆ.
ನವದೆಹಲಿಯ ಪಾಲಮ್ ವಾಯುನೆಲೆಗೆ ಪಾರ್ಥಿವ ಶರೀರಗಳು ತಲುಪಲಿದ್ದು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಇತರೆ ಸಚಿವರು, ಅಧಿಕಾರಿಗಳು ಹಾಗೂ ಸೇನಾ ಪಡೆಗಳ ಸಿಬ್ಬಂದಿ ಇರಲಿದ್ದಾರೆ.
ಶುಕ್ರವಾರ ಮಧ್ಯಾಹ್ನ 12ರಿಂದ 2ರ ವರೆಗೂ ಕಾಮರಾಜ್ ಮಾರ್ಗ್ನಲ್ಲಿರುವ ರಾವತ್ ಅವರ ಅಧಿಕೃತ ನಿವಾಸದಲ್ಲಿ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಪಾರ್ಥಿವ ಶರೀರಗಳ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಲೋಧಿ ಚಿತಾಗಾರದಲ್ಲಿ ಶುಕ್ರವಾರ ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ.
ಜನರಿಂದ ಹೂವಿನ ಮಳೆ...
#WATCH| Tamil Nadu: Locals shower flower petals & chant 'Bharat Mata ki Jai' as ambulances carrying mortal remains of CDS Gen Rawat, his wife & other personnel who died in Coonoor military chopper crash, arrive at Sulur airbase from Madras Regimental Centre in Nilgiris district pic.twitter.com/fhVIDaf5FL
— ANI (@ANI) December 9, 2021
ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಸೇರಿದಂತೆ ಹೆಲಿಕಾಪ್ಟರ್ ಪತನದಲ್ಲಿ ಸಾವಿಗೀಡಾದ 13 ಜನರ ಪಾರ್ಥಿವ ಶರೀರಗಳು ಗುರುವಾರ ಸೂಲೂರು ವಾಯುನೆಲೆಗೆ ಸಮೀಪಿಸುತ್ತಿದ್ದಂತೆ ಜನರ ಘೋಷಣೆಗಳು ಮುಗಿಲು ಮುಟ್ಟಿದವು. ರಸ್ತೆಯ ಅಕ್ಕಪಕ್ಕದಲ್ಲಿ ಸೇರಿದ್ದ ಜನರು 'ವಂದೇ ಮಾತರಂ', 'ಭಾರತ್ ಮಾತಾ ಕಿ ಜೈ' ಹಾಗೂ 'ಜೈ ಹಿಂದ್' ಘೋಷಣೆಗಳನ್ನು ಕೂಗಿದರು.
ಸಿಡಿಎಸ್ ರಾವತ್, ಅವರ ಪತ್ನಿ, ಸೇನಾ ಪಡೆಗಳ ಅಧಿಕಾರಿಗಳು ಹಾಗೂ ಯೋಧರ ಪಾರ್ಥಿವ ಶರೀರಗಳಿಗೆ ಜನರು ಅಂತಿಮ ನಮನ ಸಲ್ಲಿಸಲು ಸಾಲುಗಟ್ಟಿದ್ದರು. ಹೂವಿನ ಮಾಲೆ, ಹೂಗುಚ್ಛಗಳನ್ನು ಹಿಡಿದು ಕಾಯುತ್ತಿದ್ದರು. ಪಾರ್ಥಿವ ಶರೀರಗಳಿದ್ದ ಆಂಬುಲೆನ್ಸ್ಗಳು ಸಮೀಪದಲ್ಲಿ ಸಾಗುತ್ತಿದ್ದಂತೆ ಜನರ ಕಣ್ಣಾಲಿಗಳು ತೇವಗೊಂಡವು, ಗಂಟಲು ಕಟ್ಟಿದರೂ ಭಾರತ್ ಮಾತಾ ಕಿ ಜೈ, ಜೈ ಹಿಂದ್ ಘೋಷಣೆಗಳು ತೇಲಿ ಬಂದವು. ವಾಹನಗಳ ಮೇಲೆಯೇ ಜನರು ಹೂವಿನ ಮಳೆ ಸುರಿಸಿದರು.
ಶಸ್ತ್ರಾಸ್ತ್ರ ಪಡೆಗಳ ಸಿಬ್ಬಂದಿ ವಾಯುನೆಲೆಯಲ್ಲಿ ಅಂತಿಮ ಗೌರವ ಸಲ್ಲಿಸಿದರು.
ಇನ್ನಷ್ಟು ಓದು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.