ನವದೆಹಲಿ: ‘ದೇಶದಲ್ಲಿ ಕೋವಿಡ್–19 ವಿರುದ್ಧದ ಹೋರಾಟದ ಭಾಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ‘ಜನ ಆಂದೋಲನ್’ ಅಭಿಯಾನಕ್ಕೆ ಕೇಂದ್ರ ಸರ್ಕಾರ ಗುರುವಾರ ಚಾಲನೆ ನೀಡಿದೆ.
ಆರ್ಥಿಕ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಸಾಲು ಸಾಲು ಹಬ್ಬಗಳೂ ಮುಂದಿನ ದಿನಗಳಲ್ಲಿವೆ. ಈ ಕಾರಣದಿಂದ ಜನದಟ್ಟಣೆ ಹೆಚ್ಚಾಗಲಿದ್ದು, ಸಣ್ಣ ಅಜಾಗೃತೆಯಿಂದ ಸೋಂಕು ಮತ್ತಷ್ಟು ವ್ಯಾಪಿಸಬಹುದಾದ ಕಾರಣ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದೆ.
‘ಭಾರತದಲ್ಲಿ ಕೋವಿಡ್–19 ವಿರುದ್ಧದ ಹೋರಾಟವು ಜನಾಂದೋಲನವಾಗಿದೆ. ಇದಕ್ಕೆ ಕೋವಿಡ್ ಯೋಧರು ಮತ್ತಷ್ಟು ಬಲ ತುಂಬಿದ್ದಾರೆ. ಸೋಂಕಿನ ವಿರುದ್ಧ ಹೋರಾಡಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.
‘Unite2FightCorona’ ಎನ್ನುವ ಹ್ಯಾಶ್ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಮೋದಿ, ‘ಮುಖಗವಸು ಧರಿಸಿ, ಕೈಗಳನ್ನು ಆಗಾಗೆ ತೊಳೆಯಿರಿ, ಪರಸ್ಪರ ಅಂತರ ಕಾಪಾಡಿಕೊಳ್ಳಿ. ಒಟ್ಟಾಗಿ ನಾವು ಈ ಸೋಂಕಿನ ವಿರುದ್ಧ ಹೋರಾಡಿ ಜಯಿಸೋಣ’ ಎಂದು ಉಲ್ಲೇಖಿಸಿದ್ದಾರೆ.