ನವದೆಹಲಿ: ಚೀನಾದ ಆಕ್ರಮಣಕಾರಿ ವರ್ತನೆಗಳನ್ನು ಎದುರಿಸಲು ಭಾರತದ ಮೂರು ಪಡೆಗಳು ಸಮರ್ಥವಾಗಿವೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಗುರುವಾರ ತಿಳಿಸಿದ್ದಾರೆ.
ಭಾರತ-ಚೀನಾ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗಳನ್ನು ಉಲ್ಲೇಖಿಸಿ ಮಾತನಾಡಿರುವ ಅವರು, 'ನಮಗೆ ಗಡಿಯುದ್ದಕ್ಕೂ ಶಾಂತಿ ಮತ್ತು ನೆಮ್ಮದಿ ಬೇಕು. ಚೀನಾ ತೆಗೆದುಕೊಂಡಿರುವ ಕೆಲವು ಆಕ್ರಮಣಕಾರಿ ಕ್ರಮಗಳನ್ನು ನಾವು ತಡವಾಗಿ ನೋಡುತ್ತಿದ್ದೇವೆ. ಆದರೆ, ಅವುಗಳನ್ನು ನಿಭಾಯಿಸಲು ನಾವು ಸಂಪೂರ್ಣ ಸಮರ್ಥರಾಗಿದ್ದೇವೆ. ನಮ್ಮ ಭೂಸೇನೆ, ವಾಯುಸೇನೆ ಮತ್ತು ನೌಕಸೇನೆಗಳು ಗಡಿಯಲ್ಲಿನ ಬೆದರಿಕೆಗಳನ್ನು ಎದುರಿಸಲು ಸಶಕ್ತವಾಗಿವೆ' ಎಂದು ರಾವತ್ ಹೇಳಿದ್ದಾರೆ.
ಇದೇ ವೇಳೆ ಪಾಕಿಸ್ತಾನದ ವಿಚಾರವಾಗಿ ಹೇಳಿಕೆ ನೀಡಿರುವ ರಾವತ್, 'ನಮ್ಮ ಉತ್ತರದ ಗಡಿಯಲ್ಲಿ ಯಾವುದೇ ಅಪಾಯ ಸಂಭವಿಸಿದಾಗ ಪಾಕಿಸ್ತಾನವು ಅದರ ಲಾಭ ಪಡೆದುಕೊಳ್ಳಲು ಯತ್ನಿಸಬಹುದು. ಅದರಿಂದ ನಮಗೆ ಸ್ವಲ್ಪ ತೊಂದರೆ ಉಂಟಾಗಲೂಬಹುದು. ಪಾಕಿಸ್ತಾನದ ಅಂತಹ ಯಾವುದೇ ದುಷ್ಕೃತ್ಯ ತಡೆಯಲು ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಒಂದು ವೇಳೆ ಅಂತಹ ಪ್ರಯತ್ನಕ್ಕೆ ಕೈಹಾಕಿದರೆ, ಅದರ ನಷ್ಟವನ್ನು ಪಾಕಿಸ್ತಾನವೇ ಅನುಭವಿಸಬೇಕಾಗುತ್ತದೆ' ಎಂದು ತಿಳಿಸಿದ್ದಾರೆ.
ಗಡಿಯ ಮುಂಚೂಣಿಯಲ್ಲಿ ನಿಯೋಜಿಸಲಾಗಿರುವ ಭೂನೆಲೆ, ವಾಯುನೆಲೆ ಮತ್ತು ನೌಕಾನೆಲೆಯಲ್ಲಿನ ಯಾವುದೇ ಯೋಧರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿಲ್ಲ ಎಂದು ಬಿಪಿನ್ ರಾಹತ್ ಮಾಹಿತಿ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.