ನವದೆಹಲಿ: ಭಾರತವು ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ತಾಲಿಬಾನ್ ಜೊತೆಗೆ ಭಾರತ ಸಂಪರ್ಕ ಸಾಧಿಸಿದೆಯೇ ಎಂದು ಬುಧವಾರ ನ್ಯೂಯಾರ್ಕ್ ನಲ್ಲಿ ವರದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, 'ಸದ್ಯ ಅಫ್ಗಾನಿಸ್ತಾನದಲ್ಲಿರುವ ಭಾರತೀಯ ನಾಗರಿಕರ ರಕ್ಷಣೆ ಮತ್ತು ಅವರನ್ನು ಸುರಕ್ಷಿತವಾಗಿ ಕರೆತರುವ ಬಗ್ಗೆ ಗಮನ ಕೇಂದ್ರೀಕರಿಸಲಾಗಿದೆ' ಎಂದಿದ್ದಾರೆ.
'ನಮಗೆ ಅದು (ಭಾರತ ಅಫ್ಗಾನಿಸ್ತಾನದಲ್ಲಿ ಮಾಡಿರುವ ಹೂಡಿಕೆ) ಅಫ್ಗನ್ ಜನರೊಂದಿಗಿನ ಐತಿಹಾಸಿಕ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಅಫ್ಗನ್ ಜನರೊಂದಿಗೆ ಆ ಬಾಂಧವ್ಯ ಮುಂದುವರಿಯಲಿದೆ ಹಾಗೂ ಮುಂದಿನ ದಿನಗಳಲ್ಲಿ ಅದು ನಮ್ಮನ್ನು ಮುನ್ನಡೆಸಲಿದೆ' ಎಂದಿದ್ದಾರೆ.
'ತಾಲಿಬಾನ್ ಮತ್ತು ಅವರ ಪ್ರತಿನಿಧಿಗಳು ಕಾಬೂಲ್ ಪ್ರವೇಶಿಸಿದ್ದಾರೆ. ಪ್ರಸ್ತುತ ಎಲ್ಲರಂತೆ ನಾವೂ ಸಹ ಅಫ್ಗನ್ ನಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ' ಎಂದು ಜೈಶಂಕರ್ ತಿಳಿಸಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ಭದ್ರತಾ ಪಡೆಗಳು ನಿಯಂತ್ರಣ ಹೊಂದಿದ್ದು, ಭಾರತದ ನಾಗರಿಕರನ್ನು ಸುರಕ್ಷಿತವಾಗಿ ಕರೆತರುವ ಸಂಬಂಧ ಅಮೆರಿಕದ ಅಧಿಕಾರಿಗಳೊಂದಿಗೆ ಅವರು ಮಾತುಕತೆ ನಡೆಸಿದ್ದಾರೆ.
ಅಫ್ಗಾನಿಸ್ತಾನವು ತಾಲಿಬಾನ್ ಉಗ್ರರ ಕೈವಾಶವಾಗಿದ್ದು, ಅಲ್ಲಿನ ಪರಿಸ್ಥಿತಿ ಬಗ್ಗೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರೊಂದಿಗೆ ಜೈಶಂಕರ್ ಅವರು ಚರ್ಚಿಸಿದ್ದಾರೆ.