ಅಬುಧಾಬಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಅರಬ್ ಸಂಯುಕ್ತ ಸಂಸ್ಥಾನದ (ಯುಎಇ) ವಿದೇಶಾಂಗ ಸಚಿವಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಭಾನುವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು.
ಈ ವೇಳೆ ಉಭಯ ನಾಯಕರು, ದ್ವಿಪಕ್ಷೀಯ ಸಂಬಂಧ ಮತ್ತು ಕೋವಿಡ್ನಿಂದಾಗಿ ತತ್ತರಿಸಿರುವ ಆರ್ಥಿಕತೆಯ ಚೇತರಿಕೆಯ ಬಗ್ಗೆ ಚರ್ಚಿಸಿದರು.
‘ದ್ವಿಪಕ್ಷೀಯ ಸಹಕಾರದ ಕುರಿತಾಗಿ ಯುಎಇನ ವಿದೇಶಾಂಗ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ. ಕೋವಿಡ್ನಿಂದಾಗಿ ಆರ್ಥಿಕತೆಯು ತತ್ತರಿಸುತ್ತಿದೆ. ಹಾಗಾಗಿ ಆರ್ಥಿಕತೆಯ ಚೇತರಿಕೆಯೂ ಉಭಯ ರಾಷ್ಟ್ರಗಳ ಮೊದಲ ಆದ್ಯತೆಯಾಗಿದೆ’ ಎಂದು ಜೈ ಶಂಕರ್ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಸಭೆಯ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.
‘ಯುಎಇ–ಭಾರತ ನಡುವಿನ ಸಹಭಾಗಿತ್ವವು ವಾಣಿಜ್ಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಇತರ ಕ್ಷೇತ್ರಗಳ ಬೆಳವಣಿಗೆಗೆ ಕೊಡುಗೆಯನ್ನು ನೀಡಲಿದೆ’ ಎಂದು ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಅಭಿಪ್ರಾಯಪಟ್ಟರು.
ಕಳೆದ ವರ್ಷ ನವೆಂಬರ್ 25–26ರಂದು ಜೈ ಶಂಕರ್ ಅವರು ಯುಎಇಗೆ ಪ್ರವಾಸ ಕೈಗೊಂಡಿದ್ದರು.