ಕೊಚ್ಚಿ: ಕೊಚ್ಚಿ–ಮಂಗಳೂರು ನೈಸರ್ಗಿಕ ಅನಿಲ ಪೈಪ್ಲೈನ್ ಯೋಜನೆಯು ಪೂರ್ಣಗೊಂಡಿದ್ದು, ಇದನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶ್ಲಾಘಿಸಿದ್ದಾರೆ.
ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಕೇರಳದ ಮುಖ್ಯಮಂತ್ರಿಗಳು, ರಾಜ್ಯಪಾಲರು, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಗೇಲ್ ಸಂಸ್ಥೆಯ ಅಧಿಕಾರಿಗಳು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಪಿಣರಾಯಿ ವಿಜಯನ್ ಅವರು,‘ 2014 ರಲ್ಲಿ ವಿವಿಧ ಅಡಚಣೆಗಳಿಂದಾಗಿ ಈ ಯೋಜನೆಯನ್ನು ನಿಲ್ಲಿಸಬೇಕಾಯಿತು. 2016ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಾಗ ಈ ಯೋಜನೆಯನ್ನು ಪುನರಾರಂಭಿಸಿದೆವು. ಈ ವೇಳೆ ಗೇಲ್ ಸಂಸ್ಥೆಯ ಅಧಿಕಾರಿಗಳು ಕೂಡ ನಮಗೆ ಸಾಥ್ ನೀಡಿದರು. ನಮ್ಮ ಜಂಟಿ ಪ್ರಯತ್ನವು ಈಗ ಸಫಲಗೊಂಡಿದೆ’ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
450 ಕಿ.ಮೀ ಉದ್ದದ ನೈಸರ್ಗಿಕ ಅನಿಲ ಪೈಪ್ಲೈನ್ ಅನ್ನು ಗೇಲ್ ಇಂಡಿಯಾ ಲಿಮಿಟೆಡ್ ನಿರ್ಮಿಸಿದೆ.
ಈ ಪೈಪ್ಲೈನ್ ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೊಡ್, ಕಣ್ಣೂರು, ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮೂಲಕ ಹಾದುಹೋಗುತ್ತದೆ. ಇದು ಕರ್ನಾಟಕ ಮತ್ತು ಕೇರಳ ಸರ್ಕಾರ ಸಹಭಾಗಿತ್ವದ ಯೋಜನೆಯಾಗಿದೆ.