ತಿರುವನಂತಪುರ (ಕೇರಳ): ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂಕೋರ್ಟ್ಗೆ ತಾನು ಸಲ್ಲಿಸಿರುವ ಪ್ರಮಾಣಪತ್ರಕ್ಕೆ ಬದ್ಧ ಇರುವುದಾಗಿ ಸಿಪಿಎಂ ಸೋಮವಾರ ಸ್ಪಷ್ಟಪಡಿಸಿದೆ. ಇದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ ನೀಡಿವೆ.
‘ಈ ವಿಷಯದ ಬಗ್ಗೆ ಎಲ್ಡಿಎಫ್ ಸರ್ಕಾರ ತನ್ನ ಮೂಲ ಅರ್ಜಿಯಲ್ಲಿ ತೆಗೆದುಕೊಂಡಿರುವ ನಿಲುವಿಗೆ ಬದ್ಧವಾಗಿದ್ದು, ಅದನ್ನು ಮುಂದುವರಿಸಲಾಗುವುದು’ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ತಿಳಿಸಿದ್ದಾರೆ.
ಮತ್ತೊಂದೆಡೆ, ಚುನಾವಣಾ ಸಮಯದಲ್ಲಿ ಶಬರಿಮಲೆ ಘಟನೆಯನ್ನು ಚರ್ಚೆಯ ವಿಷಯವನ್ನಾಗಿ ಮಾಡಲು ಕೆಲವರು ಉದ್ದೇಶಪೂರ್ವಕ ಪ್ರಯತ್ನಿಸಿದ್ದಾರೆ ಎಂದು ಸಿಪಿಎಂ ಹೇಳಿದೆ.
ಸರ್ಕಾರದ ಪ್ರಮಾಣಪತ್ರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿರುವ ರಾಜೇಂದ್ರನ್ ಅವರ ನಿಲುವಿಗೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ‘ಪವಿತ್ರ ಭೂಮಿಯನ್ನು ಮತ್ತೆ ಗಲಭೆಯ ಸ್ಥಳವನ್ನಾಗಿ ಸರ್ಕಾರ ಮಾಡಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ.
‘ರಾಜೇಂದ್ರನ್ ಅವರ ಹೇಳಿಕೆಯು ಮಾರ್ಕ್ಸ್ವಾದಿ ಸರ್ಕಾರದ ಅಪ್ರಾಮಾಣಿಕ ನಡೆಯನ್ನು ಬಹಿರಂಗಪಡಿಸಿದೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕೆ.ಮುರಳೀಧರನ್ ಅವರು ಹೇಳಿದರು. ಸರ್ಕಾರಕ್ಕೆ ಭಕ್ತರ ಮತಗಳು ಬೇಕೇ ಹೊರತು ತನ್ನ ನಿರ್ಧಾರದಲ್ಲಿ ಬದಲಾವಣೆ ಮಾಡಲು ಅದು ಸಿದ್ಧವಿಲ್ಲ ಎಂದು ಆರೋಪಿಸಿದ್ದಾರೆ.