ಡೆಹ್ರಾಡೂನ್: ದೇಶದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ, ಸೋಂಕು ನಿಯಂತ್ರಣಕ್ಕೆ ಹಲವು ರಾಜ್ಯಗಳಿಂದ ಕಠಿಣ ಕ್ರಮಗಳು ಹಾಗೂ ಲಸಿಕೆ ಉತ್ಸವದ ನಡುವೆ ಹರಿದ್ವಾರದ 'ಕುಂಭ ಮೇಳ' ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷದ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಪ್ರಕರಣದೊಂದಿಗೆ ಹೋಲಿಕೆ ಮಾಡುತ್ತಿರುವ ಬಗ್ಗೆ ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ಹರಿದ್ವಾರದ ಹರ್ ಕಿ ಪೌಡಿಯಲ್ಲಿ ಸೇರಿದ ಭಕ್ತಾದಿಗಳು ಗಂಗಾ ನದಿಯಲ್ಲಿ ಪವಿತ್ರ 'ಶಾಹಿ ಸ್ನಾನ' ಮಾಡಿದರು. 13 ಅಖಾಡಗಳ ಸಾಧುಗಳು ಸಹ ಹರ್ ಕಿ ಪೌಡಿಯಲ್ಲಿ ಮೂರನೇ ಪವಿತ್ರ ಸ್ನಾನವನ್ನು ಮಾಡಲಿದ್ದಾರೆ. ಸೋಮವಾರ ನಡೆದ ಎರಡನೇ ಶಾಹಿ ಸ್ನಾನದಲ್ಲಿ ಸುಮಾರು 35 ಲಕ್ಷ ಜನರು ಭಾಗವಹಿಸಿದ್ದರು ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಅಸಾಧ್ಯವಾಗಿತ್ತು.
ಲಕ್ಷಾಂತರ ಜನರು ಅಂತರವಿಲ್ಲದೆ, ಒಟ್ಟಿಗೆ ನದಿಯಲ್ಲಿ ಸ್ನಾನ ಮಾಡಿರುವುದು ಹಾಗೂ ಸಾಲುಗಟ್ಟಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೋವಿಡ್–19 ಪ್ರಕರಣಗಳು ಏರಿಕೆಯಾಗುತ್ತಿರುವ ಸಮಯದಲ್ಲಿ ಇಂಥ ನಡವಳಿಕೆಗಳಿಂದ ಇನ್ನಷ್ಟು ಅಪಾಯ ಎದುರಾಗಬಹುದೆಂದು ಹಲವು ಮಂದಿ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ನಿಜಾಮುದ್ದೀನ್ ಮರ್ಕಜ್ನಲ್ಲಿ ನಡೆದಿದ್ದ ಧಾರ್ಮಿಕ ಸಭೆಗೆ ಹೋಲಿಸಿ ವಿಶ್ಲೇಷಣೆ ಮಾಡಿದ್ದಾರೆ. ಕಳೆದ ವರ್ಷ ನಿಷೇದಾಜ್ಞೆಯ ನಡುವೆಯೂ ನೂರಾರು ಮಂದಿ ಮರ್ಕಜ್ನಲ್ಲಿ ಸೇರಿದ್ದರು ಹಾಗೂ ತಬ್ಲಿಗಿ ಜಮಾತ್ನ ಹಲವು ಸದಸ್ಯರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು.
ಈ ಕುರಿತು ಹಿಂದುಸ್ತಾನ್ ಟೈಮ್ಸ್ ಚರ್ಚೆಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ತೀರಥ್ ಸಿಂಗ್ ರಾವತ್, 'ಕುಂಭ ಮೇಳ ಮತ್ತು ನಿಜಾಮುದ್ದೀನ್ ಮರ್ಕಜ್ ನಡುವೆ ಹೋಲಿಕೆ ಸರಿಯಲ್ಲ. ಮರ್ಕಜ್ ಒಳಾಂಗಣದಲ್ಲಿ ಕಾರ್ಯಕ್ರಮ ನಡೆದಿತ್ತು, ಕುಂಭ ಮೇಳವು ಹೊರಗಡೆ, ಗಂಗಾ ನದಿಯ ಘಾಟ್ಗಳಲ್ಲಿ ನಡೆಯುತ್ತಿದೆ' ಎಂದಿದ್ದಾರೆ.
#WATCH | Priests perform Ganga aarti at Har Ki Pauri in Haridwar, Uttarakhand.#KumbhMela2021 pic.twitter.com/Kc9Yko9niB
— ANI (@ANI) April 14, 2021
ಲಕ್ಷಾಂತರ ಜನರು ಕುಂಭ ಮೇಳಕ್ಕೆ ಬರುತ್ತಿರುವುದರಿಂದ ಕೋವಿಡ್–19 ಎರಡನೇ ಅಲೆಯನ್ನು ಮತ್ತಷ್ಟು ಸಮರ್ಥಗೊಳಿಸಿದಂತೆ ಆಗುವುದಿಲ್ಲವೇ ಎಂದು ಕೇಳಲಾದ ಪ್ರಶ್ನೆಗೆ ರಾವತ್, 'ಕುಂಭ ಮೇಳದಲ್ಲಿ ಹೊರಗಿನವರು ಭಾಗಿಯಾಗುತ್ತಿಲ್ಲ, ಎಲ್ಲರೂ ನಮ್ಮ ಜನರೇ. ಮರ್ಕಜ್ ಸಭೆ ನಡೆದಾಗ ಕೊರೊನಾ ವೈರಸ್ ಕುರಿತು ಯಾರಿಗೂ ಹೆಚ್ಚು ಮಾಹಿತಿ ಇರಲಿಲ್ಲ ಹಾಗೂ ಮಾರ್ಗಸೂಚಿಯೂ ಇರಲಿಲ್ಲ. ಸಭೆಯಲ್ಲಿ ಭಾಗವಹಿಸಿದ್ದವರು ಎಷ್ಟು ಸಮಯದಿಂದ ಕಟ್ಟಡದ ಒಳಗಿದ್ದರು ಎಂಬುದೂ ತಿಳಿದಿಲ್ಲ. ಈಗ ಕೋವಿಡ್–19 ಬಗ್ಗೆ ಸಾಕಷ್ಟು ಜಾಗೃತಿ ಇದೆ. ಹಾಗೇ ಕುಂಭ ಮೇಳ 12 ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತದೆ ಹಾಗೂ ಇದು ಲಕ್ಷಾಂತರ ಜನರ ನಂಬಿಕೆ ಮತ್ತು ಭಾವನೆಗಳೊಂದಿಗೆ ಬೆರೆತಿದೆ' ಎಂದು ಹೇಳಿದ್ದಾರೆ.
ಕೋವಿಡ್ ಸವಾಲುಗಳ ನಡುವೆಯೂ ಕುಂಭ ಮೇಳ ಯಶಸ್ವಿಯಾಗಿದೆ. ಕೋವಿಡ್ ನಿಯಂತ್ರಣಕ್ಕೆ ಅನುಸರಿಸಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು. ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ , ನಾವು ಆರೋಗ್ಯ ಸಚಿವಾಲಯದ ಮಾರ್ಗಸೂಚಿಯನ್ನು ಅನುಸರಿಸುತ್ತಿದ್ದೇವೆ ಹಾಗೂ ಪರಿಸ್ಥಿತಿಯ ನಿಯಂತ್ರಣಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಜನರ ಆರೋಗ್ಯ ಪ್ರಮುಖವಾದುದು, ಆದರೆ ನಂಬಿಕೆಯ ವಿಚಾರಗಳನ್ನೂ ಸಹ ಸಂಪೂರ್ಣ ಕಡೆಗಣಿಸಲಾಗುವುದಿಲ್ಲ ಎಂದು ರಾವತ್ ಅಭಿಪ್ರಾಯ ಪಟ್ಟಿದ್ದಾರೆ.
#KumbhMela: Devotees take a holy dip in river Ganga at Har Ki Pauri in Haridwar, Uttarakhand. pic.twitter.com/TUS2IMPcwb
— ANI (@ANI) April 13, 2021
ಹರಿದ್ವಾರ ಪ್ರವೇಶಕ್ಕೂ ಮುನ್ನ ಗಡಿಭಾಗಗಳಲ್ಲಿ ಜನರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಹಾಗೂ ಕೋವಿಡ್ ಪರೀಕ್ಷೆಗಳನ್ನೂ ಮಾಡಲಾಗುತ್ತಿದೆ. ಮೇಳದ ಪ್ರವೇಶದಲ್ಲಿ ಮಾಸ್ಕ್ಗಳು ಹಾಗೂ ಸ್ಯಾನಿಟೈಸರ್ ಪೂರೈಕೆ ಮಾಡಲಾಗಿದೆ, ಅದಕ್ಕಾಗಿ ರಾತ್ರಿ–ಹಗಲು ಶ್ರಮಿಸಲಾಗುತ್ತಿದೆ ಎಂದು ಸಿಎಂ ರಾವತ್ ಹೇಳಿದ್ದಾರೆ.
ಮಂಗಳವಾರ ಉತ್ತರಾಖಂಡದಲ್ಲಿ 24 ಗಂಟೆಗಳ ಅಂತರದಲ್ಲಿ 1,925 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಈವರೆಗೆ ದಿನದ ಅಂತರದಲ್ಲಿ ವರದಿಯಾಗಿರುವ ಅತಿ ಹೆಚ್ಚು ಪ್ರಕರಣಗಳಾಗಿವೆ. ಹರಿದ್ವಾರದಲ್ಲಿ 594 ಪ್ರಕರಣಗಳು, ಡೆಹ್ರಾಡೂನ್ನಲ್ಲಿ 775 ಪ್ರಕರಣಗಳು ದಾಖಲಾಗಿದ್ದು, 13 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.