ಚೆನ್ನೈ: ‘ಭಾಷೆ ಎಂಬುದು ಅಗತ್ಯತೆ ಆಧರಿಸಿರುತ್ತದೆಯೇ ಹೊರತು ಹೇರಿಕೆಯ ಮೇಲೆ ಅಲ್ಲ’ ಎಂದು ತಮಿಳು ಚಿತ್ರರಂಗದ ಖ್ಯಾತ ಗೀತರಚನೆಕಾರ ವೈರಮುತ್ತು ಹೇಳಿದ್ದಾರೆ.
‘ಹಿಂದಿಯನ್ನು ಇಂಗ್ಲಿಷ್ಗೆ ಪರ್ಯಾಯ ಭಾಷೆಯಾಗಿ ಬಳಸಬೇಕೇ ಹೊರತು ಸ್ಥಳೀಯ ಭಾಷೆಗಳನ್ನಲ್ಲ. ದೇಶದೆಲ್ಲೆಡೆ ಸಂಪರ್ಕ ಭಾಷೆಯಾಗಿ ದೇಶೀಯ ಭಾಷೆಯಾದ ಹಿಂದಿಯನ್ನು ಬಳಸಬೇಕು. ವಿದೇಶಿ ಭಾಷೆಯನ್ನಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದರು.
ಈ ವಿಚಾರವಾಗಿ ಟ್ವೀಟ್ ಮಾಡಿರುವ ವೈರಮುತ್ತು, ತಮಿಳು ಭಾಷೆ ಕುರಿತು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.
‘ತಮಿಳುನಾಡಿನ ಜನರು ಉತ್ತರ ಭಾರತದತ್ತ ಹೋದಾಗ ಹಿಂದಿ ಭಾಷೆಯನ್ನು ಕಲಿತು ಮಾತನಾಡಬೇಕಾಗುತ್ತದೆ. ಆದೇ ರೀತಿ ಉತ್ತರ ಭಾರತದ ಜನರು ತಮಿಳುನಾಡಿನತ್ತ ಬಂದಾಗ ತಮಿಳು ಭಾಷೆ ಕಲಿಯುವುದು ಅನಿವಾರ್ಯವಾಗುತ್ತದೆ. ಹಾಗಾಗಿ ಭಾಷೆ ಕೇವಲ ಅಗತ್ಯತೆಯನ್ನು ಆಧರಿಸಿರುತ್ತದೆ ಹೊರೆತು ಹೇರಿಕೆಯ ಆಧಾರದ ಮೇಲೆ ಅಲ್ಲ’ ಎಂದು ವೈರಮುತ್ತು ತಿಳಿಸಿದ್ದಾರೆ.
ವೈರಮುತ್ತು ಮಾಡಿರುವ ಟ್ವೀಟ್, ಗೃಹ ಸಚಿವ ಅಮಿತ್ ಶಾ ಅವರ ಇಂಗ್ಲಿಷ್ಗೆ ಹಿಂದಿ ಪರ್ಯಾಯವಾಗಿದೆ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆಯಾಗಿದೆ ಎನ್ನಲಾಗುತ್ತಿದೆ.
வடக்கே வாழப்போன தமிழர்
— வைரமுத்து (@Vairamuthu) April 9, 2022
இந்தி கற்கலாம்
தெற்கே வாழவரும் வடவர்
தமிழ் கற்கலாம்
மொழி என்பது
தேவை சார்ந்ததே தவிர
திணிப்பு சார்ந்ததல்ல
வடமொழி ஆதிக்கத்தால்
நாங்கள் இழந்த நிலவியலும் வாழ்வியலும் அதிகம்
இதற்குமேலும் இந்தியா?
தாங்குமா இந்தியா?#HindiImposition
ಉತ್ತರ ಭಾಷೆಯ (ಹಿಂದಿ) ಪ್ರಾಬಲ್ಯದಿಂದಾಗಿ ತಾವು ಸಾಕಷ್ಟನ್ನು ಕಳೆದುಕಂಡಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.
ವೈರಮುತ್ತು ಅವರು 40 ವರ್ಷಗಳ ವೃತ್ತಿಜೀವನದಲ್ಲಿ 7,500 ಕ್ಕೂ ಹೆಚ್ಚು ಹಾಡುಗಳು ಮತ್ತು ಕವಿತೆಗಳನ್ನು ಬರೆದಿದ್ದಾರೆ. ಏಳು ಬಾರಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಎಂಬ ಖ್ಯಾತಿ ವೈರಮುತ್ತು ಅವರದ್ದು.
ಅಮಿತ್ ಶಾ ಹೇಳಿಕೆ ಕುರಿತು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸೇರಿದಂತೆ ರಾಜಕೀಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.