ಮುಂಬೈ: ಶಿವಸೇನಾದ 12 ಮಂದಿ ಸಂಸದರು ರಾಜ್ಯದ ಜನತೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮನ್ನು ಸೇರಿಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 12 ಮಂದಿ ಶಿವಸೇನಾ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
‘ಲೋಕಸಭೆಯಲ್ಲಿ ಶಿವಸೇನಾದ ನೂತನ ಗುಂಪಿನ ನಾಯಕ ರಾಹುಲ್ ಶೆವಾಲೆ ಆಗಿರಲಿದ್ದಾರೆ. ಭಾವನಾ ಗವಾಲಿ ಮುಖ್ಯ ವಿಪ್ ಆಗಿರಲಿದ್ದಾರೆ’ ಎಂದು ಶಿಂದೆ ಹೇಳಿದ್ದಾರೆ.
ಶಿಂದೆ ನೇತೃತ್ವದ 40 ಮಂದಿ ಶಿವಸೇನಾ ಶಾಸಕರು, 10 ಮಂದಿ ಪಕ್ಷೇತರರು ಹಾಗೂ ಇತರ ಶಾಸಕರು ‘ಮಹಾ ವಿಕಾಸ್ ಅಘಾಡಿ’ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು, ಬಿಜೆಪಿ ಜತೆ ಕೈಜೋಡಿಸಿ ಸರ್ಕಾರ ರಚಿಸಿದ ಕೆಲವೇ ದಿನಗಳಲ್ಲಿ ಈ ವಿದ್ಯಮಾನ ನಡೆದಿದೆ.