ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈಗೆ ಬನ್ನಿ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸೋಣ: ಬಂಡಾಯಗಾರರಿಗೆ ಉದ್ಧವ್ ಕರೆ

ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು ಶಿವಸೇನಾ ಅಧ್ಯಕ್ಷ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪಕ್ಷದ ಬಂಡಾಯ ಶಾಸಕರನ್ನು ಮುಂಬೈಗೆ ಮರಳುವಂತೆ ಮಂಗಳವಾರ ಕೇಳಿಕೊಂಡಿದ್ದಾರೆ.

‘ಎಲ್ಲರೂ ಗುವಾಹಟಿಯಿಂದ ಮುಂಬೈಗೆ ಮರಳಿ ಬನ್ನಿ. ಜತೆಯಾಗಿ ಕುಳಿತುಕೊಂಡು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸೋಣ. ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ದಾರಿಯಿದೆ ಎಂಬ ಬಗ್ಗೆ ನನಗೆ ಖಾತರಿಯಿದೆ. ನಾವಿದನ್ನು ಮಾಡಬಹುದು’ ಎಂದು ಬಂಡಾಯ ಶಾಕರನ್ನು ಉದ್ದೇಶಿಸಿ ಬಿಡುಗಡೆ ಮಾಡಿರುವ ಸಂದೇಶದಲ್ಲಿ ಉದ್ಧವ್ ಉಲ್ಲೇಖಿಸಿದ್ದಾರೆ.

ಸದ್ಯ, ಏಕನಾಥ ಶಿಂಧೆ ನೇತೃತ್ವದಲ್ಲಿ ಬಂಡಾಯ ಶಾಸಕರು ಅಸ್ಸಾಂನ ಗುವಾಹಟಿಯ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದಾರೆ. ಉಭಯ ಬಣಗಳ ನಡುವೆ ಕಳೆದ ಕೆಲವು ದಿನಗಳಿಂದ ವಾಕ್ಸಮರವೂ ತೀವ್ರಗೊಂಡಿತ್ತು. ಇಂದು (ಮಂಗಳವಾರ) ಬೆಳಿಗ್ಗೆ ಉದ್ಧವ್ ಅವರನ್ನು ಉದ್ದೇಶಿಸಿ ಸಂದೇಶ ಬಿಡುಗಡೆ ಮಾಡಿದ್ದ ಶಿಂಧೆ, ನಿಮ್ಮ ಸಂಪರ್ಕದಲ್ಲಿರುವ ಒಬ್ಬ ಬಂಡಾಯ ಶಾಸಕನನ್ನು ಹೆಸರಿಸಿ ಎಂದು ಸವಾಲೆಸೆದಿದ್ದರು.

ಅಸ್ಸಾಂನ ಬಿಜೆಪಿ ಶಾಸಕರು, ನಾಯಕರು ಹಾಗೂ ಸಚಿವರು ನಿಯಮಿತವಾಗಿ ಹೋಟೆಲ್‌ಗೆ ಭೇಟಿ ನೀಡಿ, ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಪಕ್ಷೇತರ ಶಾಸಕರೂ ಸೇರಿದಂತೆ ಸುಮಾರು 50 ಮಂದಿ ಶಾಸಕರು ಶಿಂಧೆ ಜತೆ ಹೋಟೆಲ್‌ನಲ್ಲಿ ಇದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT