ಕೋಲ್ಕತ್ತ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ನೀತಿ ಆಯೋಗದ ಆಡಳಿತ ಮಂಡಳಿ ಸಭೆ ನಡೆಯಲಿದ್ದು,ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಬಾರಿಯೂ ಸಭೆಗೆ ಗೈರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರದ ಚಿಂತಕರ ಚಾವಡಿ ಆಗಿರುವ ಈ ಮಂಡಳಿಯಲ್ಲಿ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ಗಳು, ಕೇಂದ್ರದ ಕೆಲ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಇರುತ್ತಾರೆ.
ಶನಿವಾರದ ಸಭೆಯಲ್ಲಿ ದೇಶದ ಕೃಷಿ, ಮೂಲಸೌಕರ್ಯ, ಉತ್ಪಾದನಾ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರಗಳ ಕುರಿತು ಚರ್ಚೆ ನಡೆಯಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಶನಿವಾರದ ಸಭೆಗೆ ಗೈರಾಗುವ ಸಾಧ್ಯತೆ ಇದೆ ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
ಮಮತಾ ಅವರು ನೀತಿ ಆಯೋಗದ ಹಿಂದಿನ ಸಭೆಗೂ ಗೈರಾಗಿದ್ದರು. ‘ನೀತಿ ಆಯೋಗಕ್ಕೆ ಯಾವುದೇ ಆರ್ಥಿಕ ಶಕ್ತಿ ಇಲ್ಲ, ಅಲ್ಲದೆ ಅದು ರಾಜ್ಯದ ಯೋಜನೆಗಳನ್ನೂ ಬೆಂಬಲಿಸುವುದಿಲ್ಲ. ಹೀಗಾಗಿ ಈ ಸಭೆಯಲ್ಲಿ ಭಾಗವಹಿಸುವುದು ವ್ಯರ್ಥ’ ಎಂದು ಅವರು ಆರೋಪಿಸಿದ್ದರು.
ಶನಿವಾರ ನಡೆಯಲಿರುವ ಆಯೋಗದ ಆಡಳಿತ ಮಂಡಳಿಯ 6ನೇ ಸಭೆಗೆ ಜಮ್ಮು ಮತ್ತು ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾಗಿ ಭಾಗವಹಿಸಲಿದೆ. ಅಲ್ಲದೆ ಮೊದಲ ಬಾರಿಗೆ ಲಡಾಖ್ ಕೂಡ ಭಾಗಿಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಕೋವಿಡ್ ಕಾರಣದಿಂದ ಕಳೆದ ವರ್ಷ ಆಡಳಿತ ಮಂಡಳಿ ಸಭೆ ಸೇರಿರಲಿಲ್ಲ.