ನವದೆಹಲಿ: ಕೊರೊನಾ ವೈರಸ್ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ದೆಹಲಿ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಅವರಿಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಒಳಗಾಗಿದ್ದಾರೆ.
ಜ್ವರ ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದಾಗಿ ಬುಧವಾರ ಸರ್ಕಾರಿ ಸ್ವಾಮ್ಯದ ಲೋಕನಾಯಕ ಜಯಪ್ರಕಾಶ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೈದ್ಯರು, ಅವರಿಗೆ ಬಿಳಿ ರಕ್ತಕಣಗಳ ಕೊರತೆಯಿರುವುದಾಗಿ ತಿಳಿಸಿದ್ದರು.
ಮರುದಿನ (ಗುರುವಾರ) ಆಸ್ಪತ್ರೆಯ ಅಧಿಕಾರಿಗಳು ಸಿಸೋಡಿಯಾ ಅವರಿಗೆ ಡೆಂಗಿ ಇರುವುದು ಕೂಡ ಪರೀಕ್ಷೆಯಲ್ಲಿ ತಿಳಿದಿರುವುದಾಗಿ ತಿಳಿಸಿದ್ದರು. ಅದೇ ದಿನ ನಂತರ ಅವರನ್ನು ದೆಹಲಿಯ ಸಾಕೆತ್ನಲ್ಲಿರುವ ಖಾಸಗಿ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ದೆಹಲಿ ಸರ್ಕಾರದ ಇತರ ಮಂತ್ರಿಗಳೊಂದಿಗೆ, ವೈರಸ್ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕೋವಿಡ್ ಸೌಲಭ್ಯಗಳನ್ನು ಪರಿಶೀಲಿಸಿದರು ಮತ್ತು ರೋಗ ನಿರ್ವಹಣೆಯ ಮೇಲ್ವಿಚಾರಣೆಯನ್ನು ನೋಡಿಕೊಂಡಿದ್ದರು. ಸೆಪ್ಟೆಂಬರ್ 14ರಂದು ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ತಮಗೆ ಕೋವಿಡ್-19 ದೃಢಪಟ್ಟಿದ್ದು, ಹೋಂ ಕ್ವಾರಂಟೈನ್ ಆಗಿರುವುದಾಗಿ ಟ್ವೀಟ್ ಮಾಡಿ ತಿಳಿಸಿದ್ದ ಸಿಸೋಡಿಯಾ, ಜ್ವರ ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಬಳಿಕ ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಾಗಿದ್ದರು.