ಕೊಯಮತ್ತೂರು: ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರನ್ನು ಮಾತಿನ ಮೂಲಕ ಚುಚ್ಚಿರುವ ತಮಿಳುನಾಡು ಸಚಿವ ಎಸ್.ಪಿ.ವೇಲುಮಣಿ, ‘ಅವರ ಹಿರಿಯ ಅಣ್ಣ, ಡಿಎಂಕೆಯಿಂದ ಉಚ್ಚಾಟಿತ ಎಂ.ಕೆ.ಅಳಗಿರಿ ಅವರೇ ಸ್ಟಾಲಿನ್ ರಾಜ್ಯದ ಮುಖ್ಯಮಂತ್ರಿ ಆಗಲು ಸಾಧ್ಯವೇ ಇಲ್ಲ ಎಂದಿದ್ದಾರೆ’ ಎಂದು ಹೇಳಿದರು.
ಮುಂಬರುವ ಏಪ್ರಿಲ್–ಮೇ ತಿಂಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಅಧಿಕಾರ ಹಿಡಿಯಲಿದೆ ಎಂದು ಸ್ಟಾಲಿನ್ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ವೇಲುವಣಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಪೊಂಗಲ್ ಕೊಡುಗೆಗಳನ್ನು ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾನುವಾರ ಮಧುರೈನಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಅಳಗಿರಿ ಅವರು ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ’ ಎಂದರು. ‘10.11 ಲಕ್ಷ ಪಡಿತರ ಚೀಟಿ ಹೊಂದಿದವರಿಗೆ ಈ ಹಬ್ಬದ ಕೊಡುಗೆ ದೊರೆಯಲಿದೆ. ಕೊಯಮತ್ತೂರು ಜಿಲ್ಲೆಗೆ ₹269.83 ಕೋಟಿ ಮೀಸಲಿರಿಸಲಾಗಿದೆ’ ಎಂದು ಇದೇ ವೇಳೆ ವೇಲುಮಣಿ ತಿಳಿಸಿದರು. ‘ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಈ ಯೋಜನೆ ಪ್ರಾರಂಭಿಸಲಾಗಿತ್ತು’ ಎಂದರು.