ಪಟ್ನಾ: ಮುಖ್ಯಮಂತ್ರಿ ನಿತೀಶ್ಕುಮಾರ್ ನೇತೃತ್ವದಲ್ಲಿ ಎನ್ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಜೆಡಿಯು ರಾಜ್ಯ ಘಟಕದ ಮುಖ್ಯಸ್ಥ ವಸಿಷ್ಠ ನಾರಾಯಣ್ ಸಿಂಗ್ ಹೇಳಿದ್ದಾರೆ.
ವರದಿಗಾರರ ಜತೆ ಮಾತನಾಡಿದ ಅವರು ‘ಇದನ್ನು ನಾನು ಬಹಳ ದಿನಗಳಿಂದಲೂ ಹೇಳುತ್ತಿದ್ದೇನೆ. ರಾಜ್ಯದಲ್ಲಿ ಎನ್ಡಿಎ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ವಿರೋಧಪಕ್ಷಗಳು ಮತದಾರರನ್ನು ಓಲೈಸಲು ಪ್ರಚಾರ ಕಾರ್ಯವನ್ನು ದಾರಿ ತಪ್ಪಿಸಿದವು ಅಷ್ಟೆ’ ಎಂದು ಹೇಳಿದರು.
ಸರ್ಕಾರವನ್ನು ಮುನ್ನಡೆಸುವುದು ಬಿಜೆಪಿಯೋ ಅಥವಾ ಜೆಡಿಯು ಪಕ್ಷವೋ ಎಂದು ಕೇಳಿದ್ದಕ್ಕೆ ಸರ್ಕಾರವನ್ನು ಯಾರು ಮುನ್ನಡೆಸಬೇಕೆಂಬ ಬಗ್ಗೆ ಪ್ರಧಾನಮಂತ್ರಿ ಮೋದಿ, ಗೃಹ ಸಚಿವ ಅಮಿತ್ಶಾ ಮತ್ತು ಬಿಜೆಪಿ ಅಧ್ಯಕ್ಷ ನಡ್ಡಾ ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ ಎಂದರು.
ರಾಜ್ಯದಲ್ಲಿ ಎನ್ಡಿಎ ಜಯ ಸಾಧಿಸಿದರೆ ನಿತೀಶ್ಕುಮಾರ್ ಅವರೇ ಸರ್ಕಾರ ಮುನ್ನಡೆಸುವರು ಎಂದು ಮೂವರೂ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿಸಿದರು.