ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ‘ಒಂದು ದೇಶ ಒಂದು ಪಡಿತರ ಕಾರ್ಡ್‌’ ಅನುಷ್ಠಾನ

ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ
Last Updated 9 ಡಿಸೆಂಬರ್ 2020, 13:38 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಸೇರಿದಂತೆ 9 ರಾಜ್ಯಗಳು ‘ಒಂದು ದೇಶ ಒಂದು ಪಡಿತರ ಕಾರ್ಡ್‌’ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದ್ದು, ಇದರ ಬೆನ್ನಲ್ಲೇ ಈ ರಾಜ್ಯಗಳಿಗೆ ಒಟ್ಟು ₹23,523 ಕೋಟಿಯನ್ನು ಸಾಲವಾಗಿ ಪಡೆಯುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ.

ಕರ್ನಾಟಕ, ಆಂಧ್ರಪ್ರದೇಶ, ಗೋವಾ, ಗುಜರಾತ್‌, ಹರಿಯಾಣ, ಕೇರಳ, ತೆಲಂಗಾಣ, ತ್ರಿಪುರ ಹಾಗೂ ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಸುಧಾರಣೆ ಪೂರ್ಣಗೊಂಡಿದೆ. ಉತ್ತರ ಪ್ರದೇಶವು ಇದರ ಅತಿ ದೊಡ್ಡ ಫಲಾನುಭವಿಯಾಗಿದ್ದು, ₹4,851 ಕೋಟಿ ಹೆಚ್ಚುವರಿ ಸಾಲ ಪಡೆಯುವ ಅವಕಾಶ ಹೊಂದಿದೆ. ನಂತರದಲ್ಲಿ ಕರ್ನಾಟಕ ₹4,509 ಕೋಟಿ, ಗುಜರಾತ್‌ ₹4,352 ಕೋಟಿ ಹೆಚ್ಚುವರಿ ಸಾಲ ಪಡೆಯಬಹುದಾಗಿದೆ.

2020 ಡಿ.31ರೊಳಗಾಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದಲ್ಲಿ ಇತರೆ ರಾಜ್ಯಗಳು ಹೆಚ್ಚುವರಿ ಸಾಲ ಪಡೆಯಲು ಅರ್ಹವಾಗಲಿದೆ. ಈ ಅವಧಿಯೊಳಗೆ ಇನ್ನಷ್ಟು ರಾಜ್ಯಗಳು ಈ ಸುಧಾರಣೆಯನ್ನು ಅನುಷ್ಠಾನಗೊಳಿಸಲಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಈ ಯೋಜನೆಯಡಿ ಎಲ್ಲ ಪಡಿತರ ಚೀಟಿಗೆ ಆಧಾರ್‌ ಜೋಡಣೆ, ಫಲಾನುಭವಿಗಳ ಬಯೋಮೆಟ್ರಿಕ್‌ ಹಾಗೂ ಎಲ್ಲ ಪಡಿತರ ಅಂಗಡಿಗಳ ಯಂತ್ರೀಕರಣ(ಅಟೊಮೇಷನ್‌) ಮುಂತಾದ ಸುಧಾರಣೆ ಮುಖಾಂತರ, ನಕಲಿ ಪಡಿತರಕ್ಕೆ ಕಡಿವಾಣ, ಸೋರಿಕೆಗೆ ತಡೆ ಹಾಕುವ ಉದ್ದೇಶ ಹೊಂದಲಾಗಿದೆ.

ಕೋವಿಡ್‌–19 ಪಿಡುಗಿನ ಸಂದರ್ಭದಲ್ಲಿ ರಾಜ್ಯಗಳ ಹಣಕಾಸು ವ್ಯವಸ್ಥೆಯನ್ನು ಸದೃಢಗೊಳಿಸುವ ಉದ್ದೇಶದಿಂದ, 2020–21ರ ಅವಧಿಯಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಶೇ 2ರಷ್ಟನ್ನು ಹೆಚ್ಚುವರಿ ಸಾಲವಾಗಿ ಪಡೆಯಲು ಒಪ್ಪಿಗೆಯನ್ನು ಕೇಂದ್ರ ಸರ್ಕಾರ ನೀಡಿತ್ತು. ಈ ಶೇ 2ರಲ್ಲಿ, ಶೇ 0.25ನ್ನು ‘ಒಂದು ದೇಶ ಒಂದು ಪಡಿತರ ಕಾರ್ಡ್‌’ ಅನುಷ್ಠಾನಕ್ಕೆ ಮೀಸಲಿಡಲಾಗಿತ್ತು. ಈ ಮೂಲಕ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(ಎನ್‌ಎಫ್‌ಎಸ್‌ಎ) ಫಲಾನುಭವಿಗಳಿಗೆ ದೇಶದ ಯಾವುದೇ ಪಡಿತರ ಅಂಗಡಿಗಳಲ್ಲೂ ಪಡಿತರ ಪಡೆಯಲು ಅನುಕೂಲವಾಗಬೇಕು ಎನ್ನುವುದು ಇದರ ಪ್ರಮುಖ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT