ಶ್ರೀನಗರ:ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಎರಡು ವರ್ಷ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಗುಪ್ಕಾರ್ ಒಕ್ಕೂಟದ ನಾಯಕರು ಗುರುವಾರ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಮನೆಯಲ್ಲಿ ಸಭೆ ನಡೆಸಿದರು.
ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ಕಾಶ್ಮೀರ ಕಣಿವೆಯಲ್ಲಿನ ಪರಿಸ್ಥಿತಿಗಳು ಹಾಗೂ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಯಿತು ಎಂದು ಸಂಘಟನೆಯ ನಾಯಕರೊಬ್ಬರು ತಿಳಿಸಿದರು.
ಸಭೆಯಲ್ಲಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಸಿಪಿಎಂ ನಾಯಕ ಎಂ.ವೈ.ತಾರಿಗಾಮಿ, ಅವಾಮಿ ನ್ಯಾಷನಲ್ ಕಾನ್ಫರೆನ್ಸ್ನ ಹಿರಿಯ ಉಪಾಧ್ಯಕ್ಷ ಮುಜಾಫರ್ ಷಾ ಇದ್ದರು.
ಮುಫ್ತಿ ಬೇಸರ‘‘ನಾಗರಿಕರ ಮೇಲೆ ಅನಿಯಂತ್ರಿತ ದಬ್ಬಾಳಿಕೆ ನಡೆದಾಗ, ಸಮಾಜದಲ್ಲಿ ಅನ್ಯಾಯ ಸಂಭವಿಸಿದಾಗ, ಅಸ್ತಿತ್ವ ಉಳಿಸಿಕೊಳ್ಳಲು ಜನರಿಗೆ ವಿರೋಧಿಸುವುದನ್ನು ಬಿಟ್ಟು ಬೇರೆ ಆಯ್ಕೆ ಇಲ್ಲ‘ ಎಂದು ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.
‘ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲಿ ಆಗಸ್ಟ್ 5 ಎನ್ನುವುದು ಒಂದು ನಕಾರಾತ್ಮಕ ಮೈಲುಗಲ್ಲು. ಅದು ಕಣಿವೆ ರಾಜ್ಯದ ಜನರಿಗಾದ ರಾಜಕೀಯ ಮತ್ತು ಮಾನಸಿಕ ಹಿನ್ನಡೆ‘ ಎಂದು ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಕಾನ್ಫರೆನ್ಸ್ನ ಖುರ್ಷಿದ್ ಆಲಂ ಹೇಳಿದ್ದಾರೆ.