ನವದೆಹಲಿ: ಪೂರ್ವ ಲಡಾಖ್ನ ವಾಸ್ತವ ನಿಯಂತ್ರಣ ರೇಖೆಯಾದ್ಯಂತ (ಎಲ್ಎಸಿ) ಪರಿಸ್ಥಿತಿ ಸಹಜವಾಗಿದೆ ಎಂದು ಸೇನೆಯ ಉತ್ತರ ಕಮಾಂಡ್ನ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ತಿಳಿಸಿದ್ದಾರೆ.
ಭಾರತ–ಚೀನಾ ಗಡಿಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ. ಕಾರ್ಯಾಚರಣೆ ಸನ್ನದ್ಧತೆ ಮತ್ತು ಸಿದ್ಧತೆಯಲ್ಲಿ ಯಾವುದೇ ರೀತಿಯ ಭದ್ರತಾ ಲೋಪವಾಗಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
‘ಎಲ್ಎಸಿಯಾದ್ಯಂತ ಕಾರ್ಯಾಚರಣೆ ಸನ್ನದ್ಧತೆ ವಿಚಾರದಲ್ಲಿ ಯಾವುದೇ ರೀತಿಯ ಲೋಪವಾಗಿಲ್ಲ. ಈ ವಿಚಾರವಾಗಿ ನಾನು ನಿಮಗೆ ಖಾತರಿ ನೀಡಬಲ್ಲೆ’ ಎಂದು ಸೇನೆ ಆಯೋಜಿಸಿರುವ ‘ನಾರ್ತ್ ಟೆಕ್ ಸಿಂಪೋಸಿಯಂ 2022’ ಸಂದರ್ಭದಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.
‘ಗಡಿಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ. 2020ರ ಏಪ್ರಿಲ್ನಲ್ಲಿ ನಡೆದಂಥ ಘಟನೆ ಮರುಕಳಿಸದಂತೆ ಎಲ್ಲ ರೀತಿಯಲ್ಲಿಯೂ ಎಚ್ಚರ ವಹಿಸಲಾಗುತ್ತಿದೆ. ಎದುರಾಳಿಯು ಅಂಥ ದುಸ್ಸಾಹಸಕ್ಕೆ ಮತ್ತೆ ಕೈಹಾಕದಂತೆ ನೋಡಿಕೊಳ್ಳಲು ಬೇಕಾದ ರೀತಿಯಲ್ಲಿ ನಿಯೋಜನೆಗಳನ್ನು ಮಾಡಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.